



ಆಲಂಕಾರು: ಕಳೆದ ಎರಡು ದಿನಗಳಿಂದ 34 ನೆಕ್ಕಿಲಾಡಿ, ಉಪ್ಪಿನಂಗಡಿ ಪರಿಸರದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಆ.25ರಂದು ಮುಂಜಾನೆ ಕೊಯಿಲ ಕಡೆಗೆ ಬಂದಿದೆ .
ಕೊಯಿಲ ಗ್ರಾಮದ ಬೇಂಗದಪಡ್ಪು ನಿವಾಸಿ ಶಾಂತರಾಮ ಎಂಬರವರ ತೋಟದಲ್ಲಿ ಕಾಡಾನೆ ಕೃಷಿಗೆ ಹಾನಿಗೊಳಿಸಿದೆ.ಅಲ್ಲಿಂದ ವಿನಯಕುಮಾರ್ ರೈ ಕೊಯಿಲ ಪಟ್ಟೆ ಅವರ ತೋಟದ ಮೂಲಕ ಮಾಳ ಕಡೆಗೆ ಕಾಡಾನೆ ಸಂಚರಿಸಿದೆ ಎಂದು ತಿಳಿದುಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಕಾಡಾನೆ ಸಂಚಾರದ ಜಾಡು ಹಿಡಿದು ಹುಡುಕಾಟ ನಡೆಸುತ್ತಿದ್ದಾರೆ.
ಆದಿತ್ಯವಾರದ ದಿನ ಉಪ್ಪಿನಂಗಡಿ ಪೇಟೆಯ ಬಳಿ ಎರಡು ಕಾಡಾನೆಗಳು ಇದೆ ಎಂಬ ಸುದ್ದಿ ಹರಡಿ ಭಾರೀ ಸಂಖ್ಯೆಯ ಜನ ಕೂಟೇಲು ಪರಿಸರಕ್ಕೆ ಆಗಮಿಸಿ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಯುದ್ದಕ್ಕೂ ವಾಹನಗಳ ಸಾಲು ಕಂಡು ಬಂದಿತ್ತು.
ನದಿಯ ಒಂದು ಪಾರ್ಶ್ವ ಉಪ್ಪಿನಂಗಡಿ ಗ್ರಾಮವಾದರೆ, ಇನ್ನೊಂದು ಪಾರ್ಶ್ವ ಇಳಂತಿಲ ಗ್ರಾಮ ಬರುತ್ತದೆ. ಇತ್ತ ನದಿಯ ಉಭಯ ಕಡೆಗಳಲ್ಲಿಯೂ ಭಾರೀ ಜನ ಸಾಗರವನ್ನು ಕಂಡ ಕಾಡಾನೆಗಳೂ ಕೂಡಾ ಭಯಭೀತವಾಗಿ ಎತ್ತ ಸಂಚರಿಸಬೇಕೆಂದು ತಿಳಿಯದೆ ದಿನವಿಡೀ ನದಿಯಲ್ಲೇ ದಿಗ್ಭಂಧನಕ್ಕೀಡಾದಂತಾಗಿತ್ತು. ನದಿಯಲ್ಲಿ ಆನೆಗಳು ಇಳಂತಿಲ ಗ್ರಾಮದ ಕಡೆಗೆ ಸಾಗಿದರೆ ಆ ಕಡೆಯಿಂದ ಗರ್ನಾಲ್ ಶಬ್ಧ, ಉಪ್ಪಿನಂಗಡಿ ಗ್ರಾಮದತ್ತ ಮುಖ ಮಾಡಿದರೆ ಈ ಕಡೆಯಿಂದ ಗರ್ನಾಲ್ ಶಬ್ಧ ಕೇಳಿ ಬರುತ್ತಿತು. ಒಟ್ಟಿನಲ್ಲಿ ಜನವಸತಿ ಪ್ರದೇಶದತ್ತ ಬಾರದಂತೆ ಮಾಡಿದ ಪ್ರಯತ್ನಗಳೆಲ್ಲವೂ ಆನೆಯ ಪಾಲಿಗೆ ಅಹಿತಕರವಾಗಿ ಪರಿಣಮಿಸಿತ್ತು.