



ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ವತಿಯಿಂದ, ವಲಯದ ಮೇಲ್ವಿಚಾರಕ ವಿಜೇಶ್ ಜೈನ್ ಅವರ ನೇತೃತ್ವದಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮಗಳು ಜರುಗಿತು.
ಕಾರ್ಯಕ್ರಮದ ಅಂಗವಾಗಿ ದೊಡ್ಡ ಕೊಪ್ಪದ ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರ, ಕಡಬದ ಶ್ರೀ ಕಂಠೇಶ್ವರ ಮಹಾಗಣಪತಿ ದೇವಸ್ಥಾನ, ಕೋಡಿಂಬಾಳದ ಶ್ರೀರಾಮ ಭಜನಾ ಮಂದಿರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳಾರ, ಅಯ್ಯಪ್ಪ ಭಜನಾ ಮಂದಿರ ರೇಂಜಿಲಾಡಿ, ಶ್ರೀ ಉಮಾಮಹೇಶ್ವರಿ ದೇವಸ್ಥಾನ ಬಲ್ಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಿಬಾಳ್ತಿಲ, ಶ್ರೀ ಮಹಾವಿಷ್ಣು ದೇವಸ್ಥಾನ ಪಿಜಕಳ ಹಾಗೂ ಆದಿನಾಗಬ್ರಹ್ಮ ಮುಗೇರ್ ಮತ್ತು ಪರಿವಾರ ದೈವಸ್ಥಾನ ಕಕ್ಕೇನಡ್ಕ ಸೇರಿದಂತೆ ಹಲವು ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಈ
ಕಾರ್ಯಕ್ರಮಗಳಲ್ಲಿ ಸಮಿತಿ
ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು, ಊರಿನವರು, ಒಕ್ಕೂಟದ ಪದಾಧಿಕಾರಿಗಳು ಮತ್ತು ಸೇವಾ ಪ್ರತಿನಿಧಿಗಳು ಉತ್ಸಾಹದಿಂದ ಭಾಗವಹಿಸಿದರು. ಸ್ಥಳಗಳಲ್ಲಿ ಕಸದ ತೆರವು, ತೋಟ-ಪ್ರಾಂಗಣಗಳ ಸ್ವಚ್ಛತೆ, ಮುಂತಾದ ಕಾರ್ಯಗಳು ನೆರವೇರಿಸಲ್ಪಟ್ಟವು.
ಗ್ರಾಮ, ಮನೆ-ಮನೆ, ಸಾರ್ವಜನಿಕ ಸ್ಥಳಗಳು, ದೇವಾಲಯಗಳು, ಮಂದಿರಗಳು, ಮಠಗಳು, ಮಸೀದಿಗಳು, ಚರ್ಚ್ಗಳು, ಶಾಲೆಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಡೆಯವರ ಆಶಯವಾಗಿದೆ. ಅದಕ್ಕೆ ಅನುಸಾರವಾಗಿ, ಈ ವರ್ಷವೂ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಮುನ್ನ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೇಲ್ವಿಚಾರಕ ವಿಜೇಶ್ ಜೈನ್ ತಿಳಿಸಿದ್ದಾರೆ.