




ಕಡಬ ಟೈಮ್ಸ್ (KADABA TIMES) : ಕೊಕ್ಕಡದ ಪೆಟ್ರೋ ಪಾಯಿಂಟ್ ಗೆ ಕಾರಿನಲ್ಲಿ ಬಂದ ಮೂವರ ತಂಡ ಮಾಧ್ಯಮದವರೆಂದು ಪರಿಚಯಿಸಿಕೊಂಡು ಅಧಿಕ ಮೌಲ್ಯದ ಪೆಟ್ರೋಲ್ ಹಾಕಿಸಿಕೊಂಡು ಜೊತೆಗೆ ನಗದು ಕೇಳಿ ಪಡೇದು ಪರಾರಿಯಾಗಲು ಯತ್ನಿಸಿ ಬಳಿಕ ಪೊಲೀಸರ ಬಲೆಗೆ ಬಿದ್ದ ಘಟನೆ ಮೇ.31ರಂದು ರಾತ್ರಿ ನಡೆದಿದೆ.
ನಾರಾಯಣ ಗೌಡರವರ ಮಾಲಕತ್ವದ ಕೊಕ್ಕಡ ರಕ್ತೇಶ್ವರಿ ಪೆಟ್ರೋ ಪಾಯಿಂಟ್ ಗೆ ಮೇ.31ರಂದು ರಾತ್ರಿ ವೇಳೆಗೆ ಆಗಮಿಸಿದ ಅಪರಿಚಿತ ಮೂವರು ಮಾಧ್ಯಮದವರು ಎಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ತಮ್ಮ ಕಾರಿಗೆ ಎರಡು ಸಾವಿರ ರೂ.ಮೌಲ್ಯದ ಪೆಟ್ರೋಲ್ ಹಾಕಿಸಿದ್ದಾರೆ. ನಂತರ ಒಂದು ಸಾವಿರ ರೂ. ನಗದು ಕೇಳಿ ಪಡೆದು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೆಟ್ರೋಲ್ ಬಂಕ್ ಸಿಬ್ಬಂದಿ ಮೂವರನ್ನು ಬೆನ್ನಟ್ಟಿದ್ದಾರೆ.
ತಕ್ಷಣ ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಪರಾರಿಯಾದ ಇಬ್ಬರನ್ನು ಸ್ಥಳೀಯರ ಸಹಕಾರದೊಂದಿಗೆ ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಪಟ್ರಮೆ ಸಮೀಪ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನಿಬ್ಬರನ್ನು ಪೆಟ್ರೋಲ್ ಪಂಪ್ ನಲ್ಲೆ ಹಿಡಿದಿದ್ದಾರೆ.
ಧರ್ಮಸ್ಥಳ ಠಾಣಾ ಎಸ್.ಐ.ಸಮರ್ಥ ಗಾಣಿಗೇರ ಅವರು ಅಪರಿಚಿತ ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ ಅದರಲ್ಲಿ ಓರ್ವ ನ್ಯೂಸ್ ರಿಪೋರ್ಟರ್ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ತಾನು ಪೊಲೀಸ್ ಇನ್ಸ್ ಪೆಕ್ಟರ್ ಓರ್ವರ ಸಹೋದರ ಎಂದು ಹೇಳಿದ್ದಾನೆ. ಇನ್ನೋರ್ವ ತಾನು ನಿವೃತ್ತ ಯೋಧ ಎಂದೂ ಇನ್ನೋರ್ವ ತಾನು ಕೂಲಿ ಕಾರ್ಮಿಕ ಇನ್ನೊಬ್ಬ ಭಾರತ್ ವೈಭವ್ ಮಾಧ್ಯಮದವ ಎಂದೂ ಎಂದೂ ತಿಳಿಸಿದ್ದಾನೆ ಎನ್ನಲಾಗಿದೆ.
ಬೆಳಗಾವಿ ಮೂಲದವರೆನ್ನಲಾದ ಈ ನಾಲ್ವರನ್ನು ವಿಚಾರಣೆ ನಡೆಸಿದ ಬಳಿಕ ಎಸ್.ಐ.ಅವರು ಮೂರು ಸಾವಿರ ರೂ.ಹಣವನ್ನು ಪೆಟ್ರೋ ಪಾಯಿಂಟ್ ಸಿಬ್ಬಂದಿಗಳಿಗೆ ವಾಪಸ್ ಕೊಡಿಸಿದ್ದಾರೆ. ಎಂದು ತಿಳಿದು ಬಂದಿದೆ. ಪೊಲಿಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದಕ್ಕಾಗಿ ಶ್ಲಾಘನೆ ವ್ಯಕ್ತವಾಗಿದೆ. ಆದರೆ ಮಾಧ್ಯಮದ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿ, ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿ, ನಗದು ಹಣ ಪಡೆದು ಪರಾರಿಯಾಗಲು ಯತ್ನಿಸಿದ ಮೂವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.