




ಕಡಬ ಟೈಮ್ಸ್(KADABA TIMES):ಸುರತ್ಕಲ್ ನಿವಾಸಿ ಫಾಝಿಲ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರು ಮಂದಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಮಂಗಳೂರು ನ್ಯಾಯಾಲಯ ಆ.15ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಜು.27ರಂದು ರಾತ್ರಿ ಕಾರಿನಲ್ಲಿ ಬಂದ ಹಂತಕರ ತಂಡ ಫಾಝಿಲ್ ಅವರನ್ನು ಅಟ್ಟಾಡಿಸಿ ಇರಿದು ಕೊಲೆ ಮಾಡಿ ಪರಾರಿಯಾಗಿತ್ತು.ಈ ಘಟನೆಗೆ ಸಂಬಂಧಿಸಿ ಆರೋಪಿಗಳಾದ ಬಜಪೆ ಕೊಂಚಾರು ನಿವಾಸಿ ಸುಹಾಸ್ ಶೆಟ್ಟಿ, ಕಾವಿನಕಲ್ಲು ಕುಳಾಯಿ ನಿವಾಸಿ ಮೋಹನ್ ಆಲಿಯಾಸ್ ಮೋಹನ್ ಸಿಂಗ್, ವಿದ್ಯಾನಗರ ಕುಳಾಯಿ ನಿವಾಸಿ ಗಿರಿಧರ್, ಕಾಟಿಪಳ್ಳ ನಿವಾಸಿಗಳಾದ ಅಭಿಷೇಕ್, ಶ್ರೀನಿವಾಸ್ ಹಾಗೂ ದೀಕ್ಷಿತ್ ಎಂಬವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು.
ಆರೋಪಿಗಳಿಗೆ 14 ದಿನಗಳ ಪೊಲೀಸ್ ಕಸ್ಟಡಿ : ಆರೋಪಿಗಳಿಗೆ ಕಾರು ಬಾಡಿಗೆಗೆ ನೀಡಿದ್ದ ಸ್ಥಳೀಯ ಅಜಿತ್ ಕ್ರಾಸ್ತಾ ಎಂಬಾತನನ್ನು ಆರಂಭದಲ್ಲೇ ಬಂಧಿಸಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು.ಉಳಿದ ಆರು ಮಂದಿ ಆರೋಪಿಗಳಿಗೆ 14 ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.ಮಂಗಳೂರು ಉತ್ತರ ಎಸಿಪಿ ಮಹೇಶ್ ಕುಮಾರ್ ಈ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ.ಪೊಲೀಸ್ ಕಮಿಷನರ್ ಶಶಿಕುಮಾರ್ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸಿತ್ತು.

ಬಂಧಿತ ಆರೋಪಿಗಳನ್ನು ಆ.2ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು ಪ್ರಕರಣದ ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆಸಬೇಕಾದ ಅಗತ್ಯವಿರುವುದರಿಂದ ಆರೋಪಿಗಳನ್ನು ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಮಾಡಿದ್ದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿಗಳನ್ನು ಆ.15ರ ವರೆಗೆ ಪೊಲೀಸರ ಕಸ್ಟಡಿಗೆ ನೀಡಿದ್ದರು.
ಆರೋಪಿಗಳೊಂದಿಗೆ ಸ್ಥಳ ಮಹಜರು: ಆರೋಪಿಗಳನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ಆ.3ರಂದು ಬಿಗಿ ಭದ್ರತೆಯೊಂದಿಗೆ ಕೃತ್ಯ ನಡೆಸಲಾದ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ .ಪ್ರಕರಣದ ತನಿಖಾಧಿಕಾರಿಯಾಗಿರುವ ಮಂಗಳೂರು ಉತ್ತರ ಎಸಿಪಿ ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರ: ಜು.26ರಂದು ರಾತ್ರಿ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಹತ್ಯೆಗೆ ಪ್ರತೀಕಾರವಾಗಿಯೇ ಫಾಝಿಲ್ ಅವರನ್ನು ಕೊಲೆ ಮಾಡಿರುವುದಾಗಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.