




ಕಡಬ ಟೈಮ್ಸ್(KADABA TIMES):ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿಯಲ್ಲಿ 18 ಲಕ್ಷ ರೂ.ವೆಚ್ಚದಲ್ಲಿ ಡಾಂಬರೀಕರಣಗೊಂಡ ನೈತಾಡಿ ರಸ್ತೆ ಅಭಿವೃದ್ಧಿಯ ಪುತ್ತೂರು-ಮುಂಡೂರು ರಸ್ತೆಯಲ್ಲಿ ಕೂಡುರಸ್ತೆಯಿಂದ ತಿಂಗಳಾಡಿ ತನಕ ನಡೆದ ಡಾಂಬರೀಕರಣವು ಸಂಪೂರ್ಣ ಕಳಪೆಯಾಗಿದ್ದು ಇದಕ್ಕೆ ಬಿಲ್ ಪಾವತಿ ಮಾಡದಂತೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಇಂಜಿನಿಯರ್ರವರಿಗೆ ಮನವಿ ಮಾಡುವುದು ಎಂದು ಕೆದಂಬಾಡಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಭೆಯು ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರ ಅಧ್ಯಕ್ಷತೆಯಲ್ಲಿ ನಡೆಯಿತು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರುಗಳು, ಪುತ್ತೂರು-ಮುಂಡೂರು ರಸ್ತೆಯಲ್ಲಿ ಕೂಡುರಸ್ತೆಯಿಂದ ತಿಂಗಳಾಡಿ ತನಕ ಸುಮಾರು 18ಲಕ್ಷ ರೂ.ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗಿದೆ. ಆದರೆ ಡಾಂಬರೀಕರಣ ನಡೆದ 2 ತಿಂಗಳಿನಲ್ಲಿ ಡಾಂಬರ್ ಎದ್ದು ಹೋಗಿದೆ. ಮೊದಲ ಮಳೆಗೆ ಅಲ್ಲಲ್ಲಿ ಗುಂಡಿಗಳು ನಿರ್ಮಾಣಗೊಂಡಿದೆ. ಡಾಂಬರೀಕರಣವೂ ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ರತನ್ ರೈಯವರು, ಡಾಂಬರೀಕರಣ ನಡೆಯುತ್ತಿದ್ದ ಸಂದರ್ಭದಲ್ಲೂ ನಾವು ಸ್ಥಳಕ್ಕೆ ಹೋಗಿ ಡಾಂಬರೀಕರಣ ಸರಿಯಾಗಿ ಮಾಡುತ್ತಿಲ್ಲ, ಕಳಪೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿದ್ದೇವೆ ಎಂದರು. ಮೊದಲ ಮಳೆಗೆ ಅಲ್ಲಲ್ಲಿ ಡಾಂಬರ್ ಎದ್ದು ಹೋಗಿದೆ ಆದ್ದರಿಂದ ಈ ಕಾಮಗಾರಿಗೆ ಬಿಲ್ ಪಾವತಿ ಮಾಡದಂತೆ ಇಲಾಖೆಗೆ ಬರೆದುಕೊಳ್ಳುವ ಎಂದು ತಿಳಿಸಿದರು. ಸರ್ವ ಸದಸ್ಯರ ಒಪ್ಪಿಗೆಯಂತೆ ನಿರ್ಣಯಿಸಲಾಯಿತು.