




ಕಡಬ ಟೈಮ್ಸ್(KADABA TIMES):ಸುಳ್ಯ ಪೇಟೆ ಬಳಿ ಯುವಕನ ಮೇಲೆ ವಾಹನವೊಂದರಲ್ಲಿ ಬಂದ ಅಪರಿಚಿತರು ಗುಂಡಿನ ದಾಳಿ ನಡೆಸಿದ ಘಟನೆ ಜೂ 5 ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ.
ಸುಳ್ಯ ತಾಲೂಕಿನ ಸುಳ್ಯ ಕಸಬಾ ಗ್ರಾಮದ ಜಯನಗರ ನಿವಾಸಿ ಮಹಮ್ಮದ್ ಸಾಯಿ ( 39) ಗುಂಡಿನ ದಾಳಿಗೆ ಒಳಗಾದ ವ್ಯಕ್ತಿ . ಈ ದಾಳಿಯಲ್ಲಿ ಯುವಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಯುವಕನ ಕಾರಿಗೂ ಗುಂಡೇಟು ತಗುಲಿದೆ.
ಸುಳ್ಯದ ಜ್ಯೋತಿ ಸರ್ಕಲ್ ಸಮೀಪ ವೆಂಕಟರಮಣ ಸೊಸೈಟಿ ಬಳಿ ಸಾಯಿಯವರು ತನ್ನ ಹುಂಡೈ ಕ್ರೆಟಾ ಕಾರು ನಿಲ್ಲಿಸಿ ಪಕ್ಕದಲ್ಲಿದ್ದ ತನ್ನ ತಂಗಿ ಮನೆಗೆ ತೆರಳಿ ವಾಪಸ್ಸು ಕಾರಿನ ಬಳಿ ತಲುಪುತ್ತಿದ್ದಂತೆ ಗುಂಡಿನ ದಾಳಿ ನಡೆದಿದೆ.

ಮಡಿಕೇರಿ ರಿಜಿಸ್ಟ್ರೇಷನಿನ ಸ್ಕಾರ್ಪಿಯೋ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಕಾರು ಬಳಿ ನಿಂತಿದ್ದ ಸಾಯಿಯವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದೆ. ಈ ಕಾರಿನಲ್ಲಿದ್ದ ನಾಲ್ವರು ಅಪರಿಚಿತರು ಸಾಯಿಯವರನ್ನು ಹತ್ಯೆ ಮಾಡುವ ಉದ್ದೇಶದಿಂದ ಗುಂಡಿನ ದಾಳಿ ನಡೆಸಿದ್ದಾರೆ.ಗುಂಡು ಸಾಯಿ ಅವರ ಬೆನ್ನಿನ ಎಡ ಬದಿಗೆ ತಾಗಿದೆ ಹಾಗೂ ಕಾರಿನ ಬಲ ಬದಿಯ ಎರಡು ಡೋರ್ಗಳ ಮದ್ಯಕ್ಕೆ ಗುಂಡು ತಾಗಿದ ಗುರುತು ಕಾಣಿಸಿದೆ ಎಂದು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ ಕಲಂ: 307 34 ಐಪಿಸಿ ಮತ್ತು ಕಲಂ 25 27 ಆರ್ಮ್ಸ್ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ಸಾಯಿಯವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡು ಹಾರಿಸಿದ ದುಷ್ಕರ್ಮಿಗಳ ವಾಹನ ಪತ್ತೆಯಾಗಿಲ್ಲ.