




ಕಡಬ ಟೈಮ್ಸ್(KADABA TIMES):ಸುಳ್ಯ: ಇಲ್ಲಿನ ಮೊಗರ್ಪಣೆಯಲ್ಲಿ ಭಾನುವಾರ ರಾತ್ರಿ ನಡೆದ ಶೂಟೌಟ್ ಪ್ರಕರಣದ ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
ಸುಳ್ಯ ಜಯನಗರದ ಮಹಮ್ಮದ್ ಶಾಹಿ ಎಂಬವರು ಮೊಗರ್ಪಣೆ ವೆಂಕಟರಮಣ ಸೊಸೈಟಿಯ ಬಳಿ ತನ್ನ ಕಾರಿಗೆ ಹತ್ತುತ್ತಿರುವ ಸಂದರ್ಭದಲ್ಲಿ ಸ್ಕಾರ್ಪಿಯೋ ವಾಹನದಲ್ಲಿ ಬಂದ ಅಪರಿಚಿತರು ಶೂಟ್ ಮಾಡಿ ಹೋಗಿದ್ದರು. ಅದೃಷ್ಟವಶಾತ್ ಗುಂಡು ಶಾಹಿಗೆ ತಾಗದೆ ಕಾರಿಗೆ ತಾಗಿ ಕಾರು ಜಖಂ ಆಗಿತ್ತು.
ಶೂಟೌಟ್ ನಡೆಸಿದ ಆರೋಪಿಗಳ ಪತ್ತೆಗೆ ಪೊಲೀಸರು ಪ್ರಯತ್ನ ಆರಂಭಿಸಿದ್ದರು. ಇದೀಗ ಶೂಟೌಟ್ ನಡೆಸಿದ ಶಂಕೆಯ ಮೇರೆಗೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದಾಗಿ ಹೇಳಲಾಗಿದೆ.

ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು ಯಾವ ಸುಳಿವನ್ನೂ ಕೂಡ ಮಾಧ್ಯಮಗಳಿಗೆ ವ್ಬಿಟ್ಟು ಕೊಡುತ್ತಿಲ್ಲ. ಶೀಘ್ರವೇ ಘಟನೆಯ ವಿವರ ನೀಡುವುದಾಗಿ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ .
ಸಂಪಾಜೆಯ ಬಾಲಚಂದ್ರ ಕಳಗಿಯವರ ಕೊಲೆ ಆರೋಪಿಗಳಲ್ಲಿ ಕೆಲವರು ಸೇರಿ ಮಹಮ್ಮದ್ ಶಾಹಿ ಮೇಲೆ ಗುಂಡು ಹಾರಿಸಿದ್ದರೆಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿರುವುದಾಗಿ ಹೇಳಲಾಗಿದೆ. ಸ್ನೇಹಿತರ ಮಧ್ಯೆ ಬಂದಿರುವ ಭಿನ್ನಾಭಿಪ್ರಾಯದಿಂದಾಗಿ ಈ ಕೃತ್ಯ ನಡೆದಿರಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಲಭಿಸಿಲ್ಲ.