




ನೆಲ್ಯಾಡಿ: ಹೆದ್ದಾರಿ ಬದಿಯ ಕಾಂಕ್ರಿಟ್ ಚರಂಡಿಗೆ ಬಿದ್ದು ಲಾರಿ ಚಾಲಕ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿ ಬಳಿಯ ನೇಲ್ಯಡ್ಕ ಎಂಬಲ್ಲಿ ಆ.28ರಂದು ಮುಂಜಾನೆ ನಡೆದಿದೆ.
ಬೆಂಗಳೂರು ನೆಲಮಂಗಲ ನಿವಾಸಿ ಲಾರಿ ಚಾಲಕ ಹನುಮಂತರಾಯಪ್ಪ (60ವ.) ಮೃತರು. , ಆ.27ರಂದು ರಾತ್ರಿ ಮಂಗಳೂರಿನಿಂದ ಬೆಂಗಳೂರು ಕಡೆಗೆ ಲಾರಿಯನ್ನು ಚಲಾಯಿಸಿಕೊಂಡು ಬರುತ್ತಿದ್ದರು.
ಆ.28ರಂದು ಮುಂಜಾನೆ 1 ಗಂಟೆ ಸುಮಾರಿಗೆ ನೇಲ್ಯಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆ ಅಥವಾ ಇನ್ಯಾವುದೋ ಕಾರಣಕ್ಕೆ ಲಾರಿಯಿಂದ ಇಳಿದು ರಸ್ತೆ ಬದಿಗೆ ಹೋಗುವ ಸಮಯ ಆಕಸ್ಮಿಕವಾಗಿ ರಸ್ತೆ ಕಾಮಗಾರಿಯಲ್ಲಿರುವ ಕಾಂಕ್ರೀಟ್ ಚರಂಡಿಯ ಒಳಗೆ ಬಿದ್ದು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.
ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುವ ಸಮಯ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು ಈ ಬಗ್ಗೆ ಮೃತರ ಪುತ್ರ ರಾಜಶೇಖರ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.