




ಧರ್ಮಸ್ಥಳದಲ್ಲಿ ಬುಧವಾರ ಸಂಭವಿಸಿದ ಘರ್ಷಣಾ ಘಟನೆ ಸ್ಥಳೀಯವಾಗಿ ಉದ್ವಿಗ್ನತೆಯನ್ನುಂಟುಮಾಡಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸ್ ಇಲಾಖೆ ತ್ವರಿತ ಕ್ರಮ ಕೈಗೊಂಡಿದೆ. ಸ್ಥಳದಲ್ಲಿ ಪರಿಸ್ಥಿತಿ ಇದೀಗ ಶಾಂತವಾಗಿದ್ದು, ಸೇರಿದ್ದ ಜನರನ್ನು ಪೊಲೀಸರು ಚದುರಿಸಿದ್ದಾರೆ.
ಘಟನೆ ಹಿನ್ನೆಲೆ ತನಿಖೆ ಆರಂಭಿಸಿರುವ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಮೊದಲ ಪ್ರಕರಣವು ಯೂಟ್ಯೂಬರ್ಗಳ ಮೇಲೆ ನಡೆದ ಹಲ್ಲೆ ಮತ್ತು ಅವರ ಎರಡು ವಾಹನಗಳಿಗೆ ಹಾನಿ ಸಂಭವಿಸಿದ ಬಗ್ಗೆ ಆಗಿದ್ದು, ಖಾಸಗಿ ನ್ಯೂಸ್ ಚಾನೆಲ್ನ ವರದಿಗಾರನ ಮೇಲೆ ಹಲ್ಲೆ ನಡೆದಿರುವ ವಿಷಯವನ್ನೂ ಒಳಗೊಂಡಿದೆ.
ದ್ವಿತೀಯ ಪ್ರಕರಣವು ಪಾಂಗಾಳದಲ್ಲಿನ ಲಾಠಿಚಾರ್ಜ್ ನಡೆದ ಪ್ರದೇಶ, ಧರ್ಮಸ್ಥಳ ಪೊಲೀಸ್ ಠಾಣಾ ಆವರಣ ಹಾಗೂ ಸ್ಥಳೀಯ ಆಸ್ಪತ್ರೆಯ ಮುಂಭಾಗದಲ್ಲಿ ಕಾನೂನುಬಾಹಿರ ಗುಂಪು ಸೇರಿರುವ ಬಗ್ಗೆ ದಾಖಲಾಗಿದೆ.
ಘಟನೆಯಲ್ಲಿ ಹಲ್ಲೆಗೆ ಒಳಗಾದ ಕೆಲವರು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ನಡೆಸಿದ ಪ್ರಾಥಮಿಕ ತಪಾಸಣೆಯ ಪ್ರಕಾರ ಯಾವುದೇ ಗಂಭೀರ ಗಾಯಗಳು ಕಂಡುಬಂದಿಲ್ಲ ಎಂಬ ಮಾಹಿತಿ ಲಭಿಸಿದೆ.
ಈ ಮಧ್ಯೆ, ಈ ದಿನದ ಘಟನೆಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದ್ದು, ಅದನ್ನಾಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.