




ಕಡಬ ಟೈಮ್ಸ್ (KADABA TIMES):ನೆಲ್ಯಾಡಿ:ಭಾರೀ ಗಾಳಿಗೆ ಮನೆ ಮೇಲೆ ಮರಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದ್ದು ಮನೆಯೊಳಗೆ ಗಾಢ ನಿದ್ರೆಯಲ್ಲಿದ್ದ ತಂದೆ ಹಾಗೂ ಮಗು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ಜುಲೈ.26ರಂದು ತಡರಾತ್ರಿ ನಡೆದಿದೆ.
ಶಿರಾಡಿ ಗ್ರಾಮದ ಕಜೆತಕೋಡಿ ನಿವಾಸಿ ಹರೀಶ ಮುಗೇರ(36ವ.)ಹಾಗೂ
ಅವರ ಮಗು ಪ್ರತೀಕ್ಷಾ(2ವ.)ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹರೀಶರವರ ಪತ್ನಿ ಹಾಗೂ ತಾಯಿ ಅಪಾಯದಿಂದ ಪಾರಾಗಿದ್ದಾರೆ.
ಶಿರಾಡಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಈ ಮನೆಯಿದ್ದು ಅರಣ್ಯ ಜಾಗದಲ್ಲಿದ್ದ ಬೃಹತ್ ಗಾತ್ರದ ಬನ್ಪು
ಜಾತಿಯ ಮರ ಇವರ ಮನೆ ಮೇಲೆ ಬಿದ್ದಿದೆ. ಪರಿಣಾಮ ಗೋಡೆ, ಮೇಲ್ಛಾವಣಿಗೆ ಅಳವಡಿಸಿದ್ದ ಸಿಮೆಂಟ್ ಶೀಟ್
ಹಾನಿಗೊಂಡಿದೆ ಮಗುವಿನ ಹಣೆಗೆ ಗಾಯವಾಗಿದೆ.
ಘಟನೆ ಬಳಿಕ ಹರೀಶ ಅವರ ಕುಟುಂಬ ಪಕ್ಕದಲ್ಲೇ ಇರುವ ಸಂಬಂಧಿಕರ
ಮನೆಗೆ ತೆರಳಿ ರಾತ್ರಿ ಕಳೆದಿದ್ದಾರೆ. ಬೆಳಿಗ್ಗೆ
ಪುತ್ತೂರು ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಮನೆಯ ಹೊರಗಡೆ ಟರ್ಪಾಲ್ ಹಾಕಿ ನಿಲ್ಲಿಸಿದ್ದ
ದ್ವಿಚಕ್ರ ವಾಹನವೂ ಜಖಂಗೊಂಡಿದೆ.
ಅರಣ್ಯ ಇಲಾಖೆ ಜಾಗ ಹಾಗೂ ಇವರ ಮನೆಯ ಮಧ್ಯೆ ರಸ್ತೆ ಹಾದುಹೋಗಿದೆ. ರಸ್ತೆಯ ಒಂದು ಬದಿಯಲ್ಲಿದ್ದ ಮರ ಇನ್ನೊಂದು ಬದಿಯಲ್ಲಿದ್ದ ಮನೆ ಮೇಲೆ ಬಿದ್ದಿದೆ. ಇಲ್ಲಿ ಅರಣ್ಯ ಇಲಾಖೆಯವರು ಸುತ್ತಲೂ ದೊಡ್ಡ ಅಗಲು ತೆಗೆದಿದ್ದಾರೆ. ಮರದ ಬುಡದ ಪಕ್ಕದಲ್ಲೇ ಮಣ್ಣು ತೆಗೆದು ಅಗಲು ನಿರ್ಮಿಸಿರುವುದರಿಂದ ಮಣ್ಣು ಮತ್ತಷ್ಟೂ ಸಡಿಲಗೊಂಡು ಗಾಳಿ ಮಳೆಗೆ ಮರ ಮನೆಯ ಮೇಲೆಯೇ ಬಿದ್ದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸ್ಥಳಕ್ಕೆ ಅರಣ್ಯ ಹಾಗೂ ಪೊಲೀಸ್ ಇಲಾಖೆಯವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.