



ಕಡಬ ಟೈಮ್ಸ್,(Kadaba times) ಸುಳ್ಯ ನ್ಯಾಯಾಲಯದ ಇತಿಹಾಸದಲ್ಲಿ ಮೊದಲ ಬಾರಿಗೆ ಅಪರಾಧಿಗೆ ಶಿಕ್ಷೆಯಾಗಿ ದಂಡದೊಂದಿಗೆ ಸಮುದಾಯ ಸೇವೆ ಮಾಡಲು ಆದೇಶ ಮಾಡಿದ ಅಪರೂಪದ ವಿದ್ಯಮಾನ ನಡೆದಿದೆ.
ಆರೋಪಿ ಅಂಕಿತ್ ಪಲಾಯ ಎಂಬಾತ 2025 ರ ಎಪ್ರಿಲ್ 22 ರಂದು ರಾತ್ರಿ ಕರ್ತವ್ಯ ನಿರತ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರೊಂದಿಗೆ ಕೆ.ವಿ.ಜಿ. ಜಂಕ್ಷನ್ ಬಳಿ ಅನುಚಿತವಾಗಿ ವರ್ತಿಸಿದ್ದೇ ಅಲ್ಲದೆ ವಾಹನದ ದಾಖಲಾತಿಗಳನ್ನು ಹಾಜರು ಪಡಿಸದೇ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿಕೊಂಡು ಹೋದ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಮೋಟಾರು ವಾಹನ ಕಾಯ್ದೆಯ ಕಲಂ 185 ಮತ್ತು 179 ರಡಿಯಲ್ಲಿ ಸಣ್ಣ ಪ್ರಕರಣಗಳ ದೋಷಾರೋಪಣ ಪಟ್ಟಿ ದಾಖಲಾಗಿತ್ತು.ಈ ಪ್ರಕರಣದಲ್ಲಿ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಮಾನ್ಯ ಹಿರಿಯ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ್ ಬಾಬು ರವರು ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ₹10,000/- ದಂಡ ಮತ್ತು ಸಮುದಾಯ ಸೇವೆಯನ್ನು ಆದೇಶಿಸಿರುತ್ತಾರೆ. ಅಪರಾಧಿಯು ದಿನಾಂಕ 19.07.2025 ರಿಂದ 28.07.2025 ರ ವರೆಗೆ( ಒಟ್ಟು ಹತ್ತು ದಿನಗಳು) ದಿನಂಪ್ರತಿ ಬೆಳಿಗ್ಗೆ 10 ರಂದ 12 ಗಂಟೆಯವರೆಗೆ ಸುಳ್ಯ ಪೊಲೀಸ್ ಠಾಣೆಯ ಆವರಣವನ್ನು ಶುಚಿಗೊಳಿಸುವ ಮೂಲಕ ಸಮುದಾಯ ಸೇವೆ ಮಾಡಲು ಆದೇಶಿಸಲಾಗಿದೆ.
ಹಾಗೆಯೇ ಕಲಂ 179 ರ ಅಪರಾಧಕ್ಕಾಗಿ ₹2,000/- ದಂಡ ವಿಧಿಸಲಾಗಿದೆ.