




ಕಡಬ ಟೈಮ್ಸ್(KADABA TIMES): ಕಡಬ ಠಾಣಾ ವ್ಯಾಪ್ತಿಯ ಕಾಣಿಯೂರು ಸಮೀಪ ದೋಳ್ಪಾಡಿ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರಿಗೆ ಸೇರಿದ ಶೆಡ್ ಮತ್ತು ಕೃಷಿ ತೋಟವನ್ನು ರಾತ್ರಿ ವೇಳೆ ಸ್ಥಳೀಯರು ಎನ್ನಲಾದ ವ್ಯಕ್ತಿಗಳು ಕೆಡವಿ ಧ್ವಂಸ ಮಾಡಿರುವ ಅಮಾವೀಯ ಘಟನೆ ಜೂ.10 ರಂದು ನಡೆದಿತ್ತು.
ಠಾಣೆಗೆ ಎರಡೆರಡು ಬಾರಿ ದೂರು ನೀಡಿದರೂ ದೂರಲ್ಲಿ ಉಲ್ಲೇಖಿಸಿದ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ಇದುವರೆಗೂ ವಿಚಾರಣೆ ಮಾಡಿಲ್ಲ
ಎಂದು ದೂರುದಾರ ಸುಂದರ ಅವರು ಆರೋಪಿಸಿದ್ದರು. ಈ ಘಟನೆ ಬಗ್ಗೆ "ಕಡಬ ಟೈಮ್" ವರದಿ ಪ್ರಕಟಿಸಿತ್ತು. ಇದೀಗ ಈ ಘಟನೆಗೆ ಕಾರಣ ಏನೆಂಬುದನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ.
ದೂರಿನ
ಬಗ್ಗೆ ಕಡಬ ಠಾಣಾ ಪೊಲೀಸ್ ಉಪನಿರೀಕ್ಷಕರು ಘಟನಾ ಸ್ಥಳಕ್ಕೆ
ತೆರಳಿ ಪರಿಶೀಲಿಸಿದ್ದು, ಈ ವೇಳೆ ಸದ್ರಿ ಜಮೀನು ಕುಮ್ಕಿ ಜಮೀನು ಎಂಬುದಾಗಿ ತಿಳಿದು ಬಂದಿರುತ್ತದೆ.
ಜಮೀನನ್ನು ಮಾರಾಟ ಮಾಡಿದಾತ ಹಾಗೂ ಖರೀದಿಸಿದಾತನ ನಡುವೆ ಜಮೀನು ಮಾರಾಟದ ವಿಚಾರದಲ್ಲಿ ಮನಸ್ತಾಪ ಉಂಟಾಗಿ,
ಜಮೀನು ಮಾರಾಟ ಮಾಡಿದ ವ್ಯಕ್ತಿ ಅಲ್ಪ ಪ್ರಮಾಣದಲ್ಲಿ ಕೃಷಿಗೆ ಹಾಗೂ ಸದ್ರಿ ಸ್ಥಳದಲ್ಲಿದ್ದ ಶೆಡ್ ಗೆ
ಹಾನಿ ಮಾಡಿರುವುದಾಗಿದೆ.
ಈ ಘಟನೆ ಸಿವಿಲ್ ವ್ಯಾಜ್ಯವಾಗಿರುವ ಹಿನ್ನೆಲೆಯಲ್ಲಿ ಕಡಬ ಠಾಣಾ
ಪೊಲೀಸ್ ಉಪನಿರೀಕ್ಷಕರು ಜಮೀನು ಖರೀದಿಸಿದವರಿಗೆ ಹಾಗೂ ಜಮೀನು ಮಾರಾಟ ಮಾಡಿದಾತನಿಗೆ ಸೂಕ್ತ ಕಾನೂನು
ತಿಳುವಳಿಕೆ ನೀಡಿರುತ್ತಾರೆ. ಘಟನಾಸ್ಥಳಕ್ಕೆ ಈ ದಿನಾಂಕ
13.06.2025 ರಂದು ತಹಶೀಲ್ದಾರರು ಭೇಟಿ ನೀಡಿ ಪರಿಶೀಲಿಸಿ, ಜಮೀನು ಮಾರಾಟ ಮಾಡಿದಾತನಿಗೆ ಹಾಗೂ ಖರೀದಿದಾರನಿಗೆ ಜಮೀನಿಗೆ
ಸಂಬಂಧಿಸಿದಂತೆ ಅಗತ್ಯ ದಾಖಲಾತಿಗಳನ್ನು ಹಾಜರುಪಡಿಸುವಂತೆ ನೋಟಿಸ್ ನೀಡಿರುತ್ತಾರೆ. ಈ ಬಗ್ಗೆ ಠಾಣೆಯಲ್ಲಿ
ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ ಎಂದು ಜಿಲ್ಲಾ ಪೋಲಿಸರು ಮಾಹಿತಿ ನೀಡಿದ್ದಾರೆ.