




ಕಡಬ ಟೈಮ್ಸ್ (KADABA TIMES): ಸುಬ್ರಹ್ಮಣ್ಯ: ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರೂಂ ನಿರಾಕರಿಸಿದ ಯಾತ್ರಿಕನಿಗೆ ಖಾಸಗಿ ಲಾಡ್ಜ್ ಏಜೆಂಟ್ ಎನ್ನಲಾದ ಯುವಕ ಹಲ್ಲೆ ನಡೆಸಿದ ಘಟನೆ ಜೂ7 ನಡೆದಿದ್ದು ಈ ಘಟನೆಗೆ ಸಂಬಂಧಿಸಿ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಬ್ರಹ್ಮಣ್ಯ ಗ್ರಾಮದ ಕಾಶಿಕಟ್ಟೆ ಮಾರ್ಗವಾಗಿ ಆದಿ ಸುಬ್ರಹ್ಮಣ್ಯ ಕಡೆಗೆ ಹೋಗುವ ರಸ್ತೆಯಲ್ಲಿ ಲಾಡ್ಜ್ ವೊಂದರ ಮುಂಭಾಗ ಯುವಕನೊಬ್ಬನು, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮತ್ತೊಬ್ಬ ಯುವಕನನ್ನು ತಡೆದು ನಿಲ್ಲಿಸಿ, ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಕೈಯಿಂದ ಹಲ್ಲೆ ಮಾಡುತ್ತಿರುವ ವಿಡಿಯೋ ವಾಟ್ಸಾಪ್ ಮೂಲಕ ಕಂಡುಬಂದಿರುತ್ತದೆ ಎಂದು ಪೊಲೀಸರು ದೂರಿನಲ್ಲಿ ವಿವರಿಸಿದ್ದಾರೆ.
ಯುವಕನಿಗೆ ಹಲ್ಲೆ ಮಾಡಿದ ಆರೋಪಿ ಶಂಕರ್ ಎಂಬಾತನ ವಿರುದ್ದ ದಿನಾಂಕ ಜೂ.10 ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ:31/2025.ಕಲಂ:126(2),115(2),352 BNS ರಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ
ಈ ದೌರ್ಜನ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು .ಅಲ್ಲದೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.ಹಲ್ಲೆ ನಡೆಸಿದರನ್ನು ಬಂಧಿಸಬೇಕು.ಈ ಘಟನೆಯ ಹಿಂದೆ ಇರುವ ಅಕ್ರಮ ಕೊಠಡಿ ದಂಧೆಕೋರರ ಜಾಲವನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಸುಬ್ರಹ್ಮಣ್ಯದ ಪಾವಿತ್ರ್ಯತೆಯನ್ನು ಉಳಿಸಿ, ಯಾತ್ರಿಕರಿಗೆ ಸುರಕ್ಷಿತ ಮತ್ತು ನಿರ್ಭೀತ ವಾತಾವರಣವನ್ನು ಕಲ್ಪಿಸಿಕೊಡಬೇಕೆಂದು ಭಕ್ತಾದಿಗಳು ಹಾಗೂ ಸ್ಥಳೀಯರು ಆಗ್ರಹಿಸಿದ್ದರು.