




ಕಡಬ ಟೈಮ್ಸ್ ( KADABA TIMES) : ಜೂ.4ರಂದು ಸಂಜೆ ಕಡಬ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಪ್ರತಿಭಟನೆಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ನವೀನ್ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ತಮ್ಮ ಭಾಷಣದಲ್ಲಿ ಯಾರೆಲ್ಲ ಸ್ಟೇಷನ್ ಗೆ ಬರ್ತಿರೋ ಅವರ ಮೇಲೆ ಕೇಸು ಮಾಡುವುದಾಗಿ ಎಸ್ಪಿ ಹೇಳಿಕೆ ಕೊಟ್ಟಿದ್ದಾರೆ. ಹಾಗಾದರೆ ನೀವು ಅಪರಾಧ ಮುಕ್ತ ಜಿಲ್ಲೆ ಮಾಡುವಿರೋ, ಅಪರಾಧಿಗಳು ಜಾಸ್ತಿ ಆಗುವ ಜಿಲ್ಲೆಮಾಡುವಿರೋ? ಎಂದು ಪ್ರಶ್ನಿಸಿದರಲ್ಲದೆ ಕಾರ್ಯಕರ್ತರು ಏನು ಮಾಡುತ್ತಾರೆ ಎಂದು ರಾತ್ರಿ ಬಂದರೆ ಎರಡು ಗಂಟೆಗೆ ಬಂದರೆ ಗೊತ್ತಾಗುವುದಿಲ್ಲ, ಎಸ್ಪಿಯವರಲ್ಲಿ ಕೇಳಿ ಕೊಳ್ಳುತ್ತಿದ್ದೇನೆ ನಿಮ್ಮ ಯುನಿಫಾಮ್ ಕಳಜಿ ಬೆಳಿಗ್ಗೆ ಆರು ಗಂಟೆಗೆ ನಡೆಯುವ ಶಾಖೆಗೆ ಹೋಗಿ ಸ್ವಯಂ ಸೇವಕರು ಏನು ಮಾಡ್ತರೆ ಅಂತ ಗೊತ್ತಾಗುತ್ತೆ. ಬಕ್ರಿದ್ ತನಕ ಎಲ್ಲರ ಮನೆಗೆ ಹೋಗ್ತರಂತೆ. ಹಿಂದೂ ಕಾರ್ಯಕರ್ತರ ಮನೆಗೆ ಹೋದರೆ ಸಾಧ್ಯ ಆಗಲಿಕ್ಕೆ ಇಲ್ಲ, ಗೋ ಹಂತಕರ ಮನೆಗೆ ಹೋಗಿ, ಆ ತಾಕತ್ತು ನಿಮಗೆ ಇಲ್ಲ , ಮೀಟರ್ ಇಲ್ಲ, ಅವರ ಹೆಂಗಸರು ತಲ್ವಾರ್ ಇಡಿತಾರೆ, ಕಲ್ಲು ಹಿಡಿತಾರೆ ಅದಕ್ಕೆ ಹೆದರಿ ಹಿಂದೂ ಕಾರ್ಯಕರ್ತ ರ ಮನೆಗೆ ಬರ್ತಾ ಇದ್ದೀರಿ, ತಾಕತ್ತು ಇದ್ದರೆ ಅವರ ಮನೆಗೆ ಹೋಗಿ ಅಂತಹ ತಾಕತ್ತು ಇಲ್ಲದ ಎಸ್ಪಿಯವರು ಯಾವ ಶಾಂತಿಯನ್ನು ಸ್ಥಾಪಿಸಲು ಹೊರಟ್ರಿದ್ರಿ? ನಮಗೆ ಯಾವ ಹೆದರಿಕೆಯೂ ಇಲ್ಲ ಕೇಸು ಸಾವಿರವಾಗಲಿ. ನಾವೆಲ್ಲರೂ ಸಮಾಜದ ಕಾರ್ಯ ಮಾಡ್ತೆವೆ ಎಂದಿದ್ದರು.
ಘಟನೆಯ ಬಗ್ಗೆ ಠಾಣಾ ಉಪನಿರೀಕ್ಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ನವೀನ್ ನೆರಿಯ ತನ್ನ ಭಾಷಣದಲ್ಲಿ “ನೀವು ಪೊಲೀಸರು ರಾತ್ರಿ ಸಮಯ ಹಿಂದೂ ಮುಖಂಡರ ಮನೆಗೆ ಮಾತ್ರ ಹೋಗಿ ಪ್ರಮುಖರನ್ನು ಚೆಕ್ ಮಾಡಿ ಹಿಂದೂ ಧರ್ಮದ ಮುಖಂಡರಿಗೆ ಮಾತ್ರ ತೊಂದರೆಯನ್ನು ನೀಡುತ್ತಿದ್ದೀರಿ” ಎಂದು ದ್ವೇಷದ ಭಾಷಣವನ್ನು ಮಾಡಿ ಅಲ್ಲಿ ಸೇರಿದ್ದ ಸಾರ್ವಜನಿಕರಿಗೆ ಅನ್ಯಧರ್ಮದ ವಿರುದ್ಧ ದ್ವೇಷ ಭಾವನೆ ಹುಟ್ಟುವಂತೆ ಮಾಡಿರುತ್ತಾನೆ. ಆದುದರಿಂದ ಸಾರ್ವಜನಿಕ ಸ್ಥಳದಲ್ಲಿ ಅನ್ಯಧರ್ಮದ ವಿರುದ್ಧ ದ್ವೇಷ ಭಾವನೆ ಹುಟ್ಟುವಂತೆ ಮಾತನಾಡಿದಾತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪ್ರಕರಣ ದಾಖಲಿಸಲಾಗಿದೆ.