




ಕಡಬ ಟೈಮ್ಸ್ (KADABA TIMES ): ಆಲಂಕಾರು ಗ್ರಾಮದ ಕಕ್ವೆ ಪರಿಸರದಲ್ಲಿ ಮೇ 30 ರಂದು ( ಶುಕ್ರವಾರ ಸಾಯಂಕಾಲ 4ಗಂಟೆಯಿಂದ ತಡ ರಾತ್ರಿವರೆಗೆ ) ಸುರಿದ ಧಾರಕಾರ ಮಳೆಗೆ ಹಲವು ಕೃಷಿಕರ ತೋಟಕ್ಕೆ ಹಾನಿಯಾಗಿದೆ. ಅಲ್ಲದೆ ಕೆಲ ಮನೆಗಳ ಸಮೀಪವೂ ಮಣ್ಣು ಬಿದ್ದಿದೆ.
ಕೃಷಿಕ ಪದ್ಮಯ್ಯ ಗೌಡರ ತೋಟದ ಪಕ್ಕದಲ್ಲಿ ಹರಿಯುತ್ತದ್ದ ಕಣಿಯಿಂದ ನೀರು ಉಕ್ಕಿ ಹರಿದಿದೆ , ಜೊತೆಗೆ ಪಕ್ಕದ ರಸ್ತೆಯಲ್ಲಿ ಹರಿದ ನೀರು ಒಟ್ಟಾಗಿ ಹರಿದ ಪರಿಣಾಮ ರಸ್ತೆ ಯ ಒಂದು ಭಾಗ ಕೊಚ್ಚಿಕೊಂಡು ಹೋಗಿ ಸುಮಾರು 10 ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಂಡಿದೆ. 100ಕ್ಕೂ ಹೆಚ್ಚು ಫಸಲುಭರಿತ ಅಡಿಕೆ ನೀರು ಪಾಲಾಗಿದೆ.
ಇನ್ನು ಮತ್ತೋರ್ವ ಕೃಷಿಕ ಶಿವಣ್ಣ ಗೌಡರ ಫಸಲು ಭರಿತ ಸುಮಾರು 400ಕ್ಕೂ ಹೆಚ್ಚು ಗಿಡಗಳ ಮದ್ಯೆ ಕೆಸರು ನೀರು ತುಂಬಿಕೊಂಡಿದೆ. ತೋಟಕ್ಕೆ ನೀರುಣಿಸಲು ಇದ್ದ ಬೃಹದಾಕಾರದ ಕೆರೆ ಸಂಪೂರ್ಣ ಮಣ್ಣು ತುಂಬಿಕೊಂಡು ಮುಚ್ಚಿ ಹೋಗಿದೆ. ತೋಟದ ಪಕ್ಕದಲ್ಲಿದ್ದ ಮರಗಳು,ಅಡಿಕೆ ಗಿಡಗಳು ಧರಶಾಯಿಯಾಗುತ್ತಲೇ ಇದೆ.
ಮುಂದುವರಿದು ಆಲಂಕಾರಿನ ತೋಟಂತಿಲ ಬಾಬು ಮುಗೇರ ಎಂಬವರ ಮನೆ ಬಳಿ ಮಣ್ಣು ಕುಸಿತವಾಗಿದ್ದು ಮತ್ತೆ ಕುಸಿಯುವ ಭೀತಿ ಉಂಟಾಗಿದೆ. ಇನ್ನು ಪುಳಿತ್ತಡಿ ಮತ್ತು ಕೆಮ್ಮಾರ ಸಮೀಪ ಹೆದ್ದಾರಿ ಬದಿಯಲ್ಲಿ ಧರೆ ಕುಸಿತವಾಗಿದೆ. ಮಳೆ ಪ್ರಮಾಣ ಇನ್ನಷ್ಟು ಹೆಚ್ಚಿದಲ್ಲಿ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ.