


ಕಡಬ ಟೈಮ್, ಆಲಂಕಾರು: ಕಡಬ ಠಾಣೆ ವ್ಯಾಪ್ತಿಯ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ಜ.14 ರಂದು ಕಡಬ ಪೊಲೀಸರು ತಡೆದು ಅದರಲ್ಲಿದ್ದ ಗೋವುಗಳನ್ನು ರಕ್ಷಿಸಿದ್ದರು. ಈ ಘಟನೆ ನಡೆದು ಇಂದಿಗೆ ಜ.29 ಕ್ಕೆ ಹದಿನೈದು ದಿನಗಳು ಕಳೆದಿದ್ದು ಆರೋಪಿಗಳ ಪತ್ತೆಯಾಗಿಲ್ಲ.
ಪರಾರಿಯಾದ ದನಕಳ್ಳರು ಪ್ರಭಾವಿಗಳೇ ಅಥವಾ
ಪೊಲೀಸರ ಕಣ್ತಪ್ಪಿಸಲು ಯಾರಾದರೂ ಸಹಾಯ ಮಾಡಿದರೇ ಇತ್ಯಾದಿ ಚರ್ಚೆಗಳು ಆರಂಭವಾಗಿದೆ. ಆರೋಪಿಗಳು ಸಿಗದ ಪಕ್ಷದಲ್ಲಿ ವಾಹನದ ವಾರಿಸುದಾರರನ್ನಾದರೂ
ವಶಕ್ಕೆ ಪಡೆಯಬೇಕಿತ್ತು ಇತ್ಯಾದಿ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ದ.ಕ ಜಿಲ್ಲೆಯಲ್ಲಿ ನಡೆದಿರುವ ಹಲವು ಪ್ರಕರಣಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್(IPS)ಮಾರ್ಗದರ್ಶನದಂತೆ ಹಲವು ಠಾಣಾ ಪೊಲೀಸರು ಈಗಾಗಲೇ ಬೇಧಿಸಿದ್ದಾರೆ. ಈ ಪ್ರಕರಣದಲ್ಲೂ ಪೊಲೀಸರು ಆರೋಪಿಗಳನ್ನು ಶ್ರೀಘ್ರ ಬಂಧಿಸುತ್ತಾರೆ ಎನ್ನುವ ಭರವಸೆ, ನಂಬಿಕೆ ಇಲ್ಲಿನ ಜನರದ್ದಾಗಿದೆ.
ಈ ಅಕ್ರಮ ಜಾನುವಾರ ಸಾಗಾಟ ಘಟನೆಯ ಹಿನ್ನೆಲೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಘಟನಾ ಸ್ಥಳಕ್ಕೆ ತೆರಳಿ ಆಕ್ರೋಶ ಹೊರ ಹಾಕಿದ್ದರು. ಅಲ್ಲದೆ ಮರುದಿನ ಕಡಬ ಪೊಲೀಸ್ ಠಾಣೆಯ ಮುಂಭಾಗದ ಪ್ರಮುಖ ರಸ್ತೆಯಲ್ಲಿ ವಿಶ್ವ ಹಿಂದೂ ಪರಿಷತ್ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಆದ್ರೆ ನಂತರದ ಬೆಳವಣಿಗೆಯಲ್ಲಿ ಸಂಘಟನೆಗಳು ಇಲಾಖೆಗೆ ಒತ್ತಡ ಹಾಕುವ, ವಿಚಾರಿಸುವ ಕೆಲಸವನ್ನು ಮಾಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ದಾಳಿಯ ಸಂದರ್ಭ ಪೊಲೀಸರ ವಾಹನ ಕಂಡು ಪಿಕಪ್ ವಾಹನವನ್ನು ಅಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ವಾಹನವನ್ನು ಪರಿಶೀಲಿಸಿ ದಾಗ ಜಾನುವಾರುಗಳ ಕಾಲುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿರುವುದು ಕಂಡು ಬಂದಿತ್ತು. ಪಿಕ್ ಅಪ್ ವಾಹನದಲ್ಲಿ ಗೋವುಗಳ ಕೈಕಾಲು ಕಟ್ಟಿ ತುಂಬಿಸಿ ಮೇಲೆ ಗೋವುಗಳ ಪತ್ತೆಯಾಗ ಬಾರದೆಂದು ಅದರ ಮೇಲೆ ಹಲಗೆಯನ್ನಿಟ್ಟು, ಮೇಲ್ಬಾಗದಲ್ಲಿ ತರಕಾರಿ ತುಂಬುವ ಕ್ರೇಟ್ ಗಳನ್ನು ಇಡಲಾಗಿತ್ತು. ಠಾಣೆಗೆ ಕರೆದೊಯ್ಯುವ ವೇಳೆ ಆದಾಗಲೇ ಮೂರು ಗೋವುಗಳು ಸಾವಿಗೀಡಾಗಿದ್ದವು. ಯಾವುದೇ ಪರವಾನಗಿ ಇಲ್ಲದೇ ಮಾಂಸ, ಮಾಡುವ ಅಥವಾ ಇತರೆ ಉದ್ದೇಶಕ್ಕಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದರು. ಬಳಿಕ ಜಾನುವಾರುಗಳನ್ನು ಕೊಯಿಲದ ಗೋ ಶಾಲೆಗೆ ಕಳುಹಿಸಿದ್ದರು.
ಪೊಲೀಸರು ವಾಹನದಲ್ಲಿ ಅಮಾನವೀಯವಾಗಿ ಸಾಗಿಸುತ್ತಿದ್ದ
ಎಂಟು ಗೋವುಗಳನ್ನು ಪತ್ತೆ ಹಚ್ಚಿದ್ದರು. ಕಡಬ ಠಾಣಾ ಎಸ್.ಐ ಅಭಿನಂದನ್ ನೇತೃತ್ವದಲ್ಲಿ ಹೆಡ್ ಕಾನ್ಸ್ಟೆಬಲ್
ಹರೀಶ್, ಸಿಬ್ಬಂದಿಯವರಾದ ವಿಠಲ ಜೋಗಣ್ಣನವರ್. ಪ್ರವೀಣ ಶಿಂಗಣ್ಣನವರ್ ತಂಡ ಕಾರ್ಯಾಚರಣೆ
ಮಾಡಿದ್ದರು .