




ಕಡಬ
ಟೈಮ್,ಪುತ್ತೂರು: ಛತ್ತೀಸ್ಗಢ ನೊಂದಾವಣೆಯ ಕಾರೊಂದರಲ್ಲಿ
ಅಪರಿಚಿತರಿಬ್ಬರು ಮನೆ ಮನೆಗೆ ಹೋಗಿ ‘ಸ್ಕ್ರ್ಯಾಚ್ & ವಿನ್’
ರೀತಿಯ ಲೈನ್ ಸೇಲ್ ನಲ್ಲಿ ತೊಡಗಿಸಿಕೊಂಡಿದ್ದು, ಅನುಮಾನಗೊಂಡ ಸ್ಥಳೀಯರು
ಗ್ರಾ.ಪಂ ಗೆ ಅವರನ್ನು ಕರೆದೊಯ್ದು ನಂತರ ಪೊಲೀಸರಿಗೊಪ್ಪಿಸಿದ
ಘಟನೆ ನಡೆದಿದೆ.
ಬಾಲಾಜಿ ಮಾರ್ಕೆಟಿಂಗ್ & ಸೇಲ್ಸ್ ಹೆಸರಿನಲ್ಲಿ ಕೂಪನ್ ಹೊಂದಿರುವ ಇವರು ಟಿವಿ, ಫ್ರಿಡ್ಜ್ ಸೇರಿದಂತೆ ಗೃಹೋಪಯೋಗಿ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ಮತ್ತು ಕೂಪನ್ ಕೊಟ್ಟು ಅದನ್ನು ಸ್ಕ್ರಾಚ್ ಮಾಡಿದ್ದಲ್ಲಿ ಅದರಲ್ಲಿ ಬಂದ ವಸ್ತುಗಳನ್ನು ಕೊಡುವುದಾಗಿ ಜನರನ್ನು ನಂಬಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಬೆಟ್ಟಂಪಾಡಿ ಪಂಚಾಯತ್ ಗೆ ವಿಷಯ ತಿಳಿಸಿ ಅಲ್ಲಿಗೆ ಕರೆತಂದಿದ್ದರು.
ಗ್ರಾಮಸ್ಥರು ಸೇರಿದಂತೆ ಬೆಟ್ಟಂಪಾಡಿ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಕೋರ್ಮಂಡ ಸಹಿತ ಹಲವು ಮಂದಿ ಆಗಮಿಸಿದ್ದರು.
ಆ ಬಳಿಕ ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಸ್ಪಷ್ಟವಾದ ದಾಖಲೆಗಳಿಲ್ಲದೇ ಇರುವುದು ಕಂಡುಬಂದಿದೆ. ಪುತ್ತೂರು
ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ರವರ ನಿರ್ದೇಶನದಂತೆ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರು ಸೇರಿದಂತೆ 10 ಕಡೆ ಶಾಖೆಗಳನ್ನು ಹೊಂದಿರುವುದಾಗಿ ನಮೂದಿಸಲಾಗಿದರೂ ಜಿಲ್ಲಾಡಳಿತ ಅಥವಾ ಸ್ಥಳೀಯಾಡಳಿತದಿಂದ ಯಾವುದೇ ಅಧಿಕೃತ ಪರ್ಮಿಷನ್ ಇಲ್ಲದೇ ಇವರು ಮನೆ ಮನೆಗೆ ಹೋಗುತ್ತಿರುವುದಾಗಿ ಆರೋಪಿಸಿರುವ ಸ್ಥಳೀಯರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ರೀತಿಯಾಗಿ ಅಪರಿಚಿತರು ಬರುವುದರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ರೀತಿಯ ಮಾರ್ಕೆಟಿಂಗ್ ಮಾಡುವವರು ಪಂಚಾಯತ್ ಪರವಾನಿಗೆ ಪಡೆದುಕೊಳ್ಳುವಂತೆಯೂ ಪಂಚಾಯತ್ ನಿರ್ಣಯವಿದೆ. ಈ ನಿಟ್ಟಿನಲ್ಲಿ ಅನಧಿಕೃತವಾಗಿ ಮಾರ್ಕೆಟಿಂಗ್ ಮಾಡುವವರ ವಿರುದ್ದ ಸಾರ್ವಜನಿಕ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಮತ್ತು ತಾಲೂಕು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಸಿದ್ದಾರೆ.