


ಕಡಬ ಟೈಮ್ ,ಕುಕ್ಕೆ ಸುಬ್ರಹ್ಮಣ್ಯ : ಧಾರ್ಮಿಕ ಕ್ಷೇತ್ರಗಳಾಗಿ ಹೆಸರುವಾಸಿಯಾಗಿರುವ ಕುಕ್ಕೆ ಸುಬ್ರಹ್ಮಣ್ಯ- ಧರ್ಮಸ್ಥಳಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ದೂರದ ಪ್ರದೇಶದಿಂದ ಬರುವ ಯಾತ್ರಾರ್ಥಿಗಳ ತಂಡ ಪ್ರಮುಖ ಹೆದ್ದಾರಿಗಳ ಪಕ್ಕ ವಾಹನ ನಿಲ್ಲಿಸಿ ಅಲ್ಲಲ್ಲಿ ಉಪಹಾರಕ್ಕಾಗಿ ಅಡುಗೆ ಮಾಡುತ್ತಿದ್ದಾರೆ.
![]() |
ಸುಬ್ರಹ್ಮಣ್ಯ ಹೆದ್ದಾರಿ ಬದಿಯಲ್ಲಿ ಅಡುಗೆ ಮಾಡುತ್ತಿರುವ ದೃಶ್ಯ |
ಉಪಹಾರ ಸೇವಿಸಿದ ಬಳಿಕ ತ್ಯಾಜ್ಯ, ಪ್ಲಾಸ್ಟಿಕ್,ಊಟದ ತಟ್ಟೆ ಗಳನ್ನು, ರಸ್ತೆ ಬದಿಯಲ್ಲಿ, ಎಸೆಯುತ್ತಿದ್ದು ಹೆದ್ದರಿಗಳ ಚರಂಡಿ ಸೇರುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸೇತುವೆಯಿಂದ ಕುಲ್ಕುಂದ ಕಡೆಗೆ ಹೋಗುವ ರಾಜ್ಯ ರಸ್ತೆಯ ಪಕ್ಕದಲ್ಲಿ ಬಸ್ ನಿಲ್ಲಿಸಿ ಅಡುಗೆ ತಯಾರಿ ಮಾಡುವ ದೃಶ್ಯಗಳು ಕಂಡು ಬರುತ್ತಿವೆ. ಈ ಎಲ್ಲಾ ತ್ಯಾಜ್ಯಗಳು ಮಳೆಗಾಲದಲ್ಲಿ ನದಿ ಮೂಲಗಳನ್ನು ಸೇರುತ್ತಿದೆ, ಜೊತೆಗೆ ಚರಂಡಿಗಳಲ್ಲಿ ನೀರು ಹರಿದು ಹೋಗಲು ತೊಡಕಾಗುತ್ತಿದೆ .
ಆಹಾರ ಸೇವಿಸಿದ ಬಳಿಕ ತಟ್ಟೆ, ಆಹಾರ, ನೀರಿನ ಬಾಟಲ್ ಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಎಸೆದು ಪರಿಸರ ಹಾಳಾಗುವಂತೆ ಮಾಡುತ್ತಿರುವುದಕ್ಕೆ ಪರಿಸರ ಪ್ರೇಮಿಗಳು, ಪ್ರಜ್ಞಾವಂತ ನಾಗರಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ . ಸ್ವಚ್ಚತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವಿದ್ದು ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅರಿವು ಮೂಡಿಸುವ ಜೊತೆಗೆ ಸೂಚನಾ ಫಲಕ ಹಾಗೂ ಕಾನೂನು ಕ್ರಮದ ಎಚ್ಚರಿಕೆ ನೀಡುವಂತೆ ಪ್ರಜ್ಞಾವಂತ ನಾಗರಿಕರು , ಸಾರ್ವಜನಿಕರು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ .