


ಕೊಲೆ ಆರೋಪಿ ಪ್ರತೀಕ್ (KADABA TIMES)
ಕಡಬ: ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೋರ್ವನ ಶವ ಪತ್ತೆಯಾಗಿದ್ದು ಈತನನ್ನು ಕೊಲೆ ಮಾಡಿ ಮೃತ ದೇಹವನ್ನು ಕಾಡಿನೊಳಗೆ ಹಾಕಿ ಹೋಗಿದ್ದ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದ್ದು ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ದಿ.ಸಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29ವ.)ಕೊಲೆಯಾದವರು. ನೆಟ್ಟಣ ಚೆಂಡೆಹಿತ್ತಿಲು ಕುಶಾಲಪ್ಪ ಗೌಡರ ಮಗ ಪ್ರತೀಕ್ ಕೊಲೆ ಆರೋಪಿಯಾಗಿದ್ದಾನೆ.
ಸಂದೀಪ್ ಗೌಡ ಅವರ ಶವ ನೆಟ್ಟಣ ಸಮೀಪದ ಕಾಡಿನಲ್ಲಿ ಪತ್ತೆಯಾಗಿದೆ. ಸಂದೀಪ್ ಅವರನ್ನು ಕೊಲೆ ಮಾಡಿ ನೆಟ್ಟಣ ಸಮೀಪದ ನಾರಡ್ಕ ಕಾಡಿನಲ್ಲಿ ಮರದ ದಂಬೆಯೊಳಗೆ ಹಾಕಲಾಗಿದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಆರೋಪಿಯನ್ನು ಕಾಡಿಗೆ ಕರೆದೊಯ್ದು ಶವವನ್ನು ಪತ್ತೆ ಹಚ್ಚಿ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ .ಮೃತ ಸಂದೀಪ್ ಅವರು ತಾಯಿ ಸರೋಜ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಪ್ರಕರಣದ ತನಿಖೆಗೆ ಒತ್ತಾಯಿಸುತ್ತಿರುವ ಗ್ರಾಮಸ್ಥರು(kadaba times)
ಒಬ್ಬನಿಂದ ಈ ಕೃತ್ಯ ಸಾಧ್ಯವೇ?: ಈ ಕೊಲೆ ಪ್ರಕರಣದ ಸುತ್ತ ಹಲವು ಅನುಮಾನಗಳು ಜನರನ್ನು ಕಾಡುತ್ತಿದೆ. ದಟ್ಟ ಕಾಡಿನ ಮಧ್ಯೆ ಮೃತದೇಹವನ್ನು ಎಸೆಯಲಾಗಿದ್ದು, ರಸ್ತೆಯಿಂದ ಸುಮಾರು 1 ಕಿಮೀ ದೂರದಲ್ಲಿದೆ . ಅಷ್ಟು ದೂರ ಒಬ್ಬನೇ ವ್ಯಕ್ತಿ ಮೃತದೇಹವನ್ನು ಕೊಂಡು ಹೋಗಲು ಅಸಾಧ್ಯ. ಹೀಗಾಗಿ ಇದರಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದು, ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಉಳಿದ ಆರೋಪಿಗಳನ್ನು ಬಂದಿಸಬೇಕು ಎಂದು ಮೃತರ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ನ 27 ರಂದು ಸಂಜೆ ಸಮದೀಪ್ ನಾಪತ್ತೆಯಾಗಿದ್ದು ಆ ಬಳಿಕ ಆತ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ . ಮೃತದೇಹ ಕೊಳೆತಿರುವ ಸ್ಥಿತಿಯನ್ನು ಗಮನಿಸಿದಾಗ, ಅದೇ ದಿನ ಸಂದೀಪ್ ಕೊಲೆಯಾಗಿರುವ ಸಾಧ್ಯತೆ ಅಧಿಕ. ಪ್ರತಿಕ್ ಗೆ ಪೆಟ್ರೋಲ್ ತಂದು ಕೊಡಲು ಇಬ್ಬರು ನೆರವಾಗಿದ್ದಾರೆ ಎನ್ನಲಾಗುತ್ತಿದ್ದು, ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು ಎಂಬ ಮಾಹಿತಿ ಲಭಿಸಿತ್ತು.
ನಾಪತ್ತೆಯಾದ 3 ದಿನದ ಬಳಿಕ ಕಡಬ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೈಟ್: ಮೃತ ಸಂದೀಪ್ ಮನೆಯವರು ಕಡಬ ಠಾಣೆಗೆ ತೆರಳಿ ನಾಪತ್ತೆ ದೂರು ನೀಡಿದ್ದರು . ಆದರೇ ಈ ವೇಳೆ ಕಡಬ ಠಾಣೆಯಲ್ಲಿ ದೂರು ಸ್ವೀಕರಿಸಲು ನಿರಾಕರಿಸಿದರು ಮಾತ್ರವಲ್ಲದೇ ಪೊಲೀಸ್ ಸಿಬ್ಬಂದಿಯೊಬ್ಬರು ಠಾಣೆಯಿಂದ ತಮ್ಮನ್ನು ಓಡಿಸಿರುವುದಾಗಿ ಮನೆಯವರು ಆರೋಪಿಸಿದ್ದಾರೆ. ನಾಪತ್ತೆಯಾದ 3 ದಿನದ ಬಳಿಕ ಕಡಬ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೈಟ್ ದಾಖಲು ಮಾಡಿಕೊಳ್ಳಲಾಗಿತ್ತು. ಆರೋಪಿಯನ್ನು ಬಚಾವು ಮಾಡಲು ಸ್ಥಳೀಯ ರಾಜಕೀಯ ಪುಡಾರಿಯೊಬ್ಬರು ಪೊಲೀಸರ ಮೇಲೆ ಪ್ರಭಾವ ಬೀರಿದ್ದರು. ಹೀಗಾಗಿ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಲು ಆಸಕ್ತಿ ತೋರಲಿಲ್ಲ ಎಂದು ಆರೋಪಗಳು ಕೇಳಿ ಬಂದಿದ್ದವು ಅಲ್ಲದೆ ಸ್ಥಳೀಯವಾಗಿ ಸುದ್ದಿಗಳು ಹರಿದಾಡಿತ್ತು.
![]() |
ಮೃತ ಯುವಕ ಸಂದೀಪ್( kadaba times) |
ಪೊಲೀಸರ ಮೇಲೆಯೇ ಆರೋಪ: ಶವ ಪತ್ತೆಗೂ ಮೊದಲು ಪೊಲೀಸರು ಕೊಲೆಗೆ ಬಳಸಿದ ಆಯುಧ ಪತ್ತೆಗೆ ಹೊರಟದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಕೆಲವು ಪೊಲೀಸರಿಗೆ ಕೃತ್ಯ ನಡೆದ ಮಾಹಿತಿ ಮೊದಲೇ ಗೊತ್ತಿತ್ತು. ಹೀಗಾಗಿಯೇ ದೂರು ನೀಡಲು ಬಂದಾಗ ಸ್ವೀಕರಿಸಲು ಹಾಗೂ ರಾಜಕೀಯ ಒತ್ತಡಕ್ಕೆ ಒಳಗಾಗಿ ಹಂತಕನನ್ನು ಬಚಾವು ಮಾಡಲು ಉದ್ದೇಶಪೂರ್ವಕವಾಗಿ ತನಿಖೆಯಲ್ಲಿ ಕಾಲಹರಣ ಮಾಡಲಾಗಿದೆ ಎಂದು ಆ ಭಾಗದ ಗ್ರಾಮಸ್ಥರು ಆರೋಪಿಸಿದ್ದಾರೆ.
ಮರ್ದಾಳದ ಶಾಮಿಯಾನ ಸರ್ವಿಸ್ ಒಂದರಲ್ಲಿ ಕೆಲಸ ನಿರ್ವಹಿಸಿಕೊಂಡಿದ್ದ ಸಂದೀಪ್ ನ.27ರಂದು ಕೆಲಸ ಮುಗಿಸಿ ಅಲ್ಲಿಂದ ಹೊರಟು ಬಂದಿದ್ದವರು ನಾಪತ್ತೆಯಾಗಿದ್ದರು. ಮನೆಗೆ ಬಾರದೆ, ಫೋನ್ ಸಂಪರ್ಕಕ್ಕೂ ಸಿಗದ ಹಿನ್ನೆಲೆಯಲ್ಲಿ ಅವರ ತಾಯಿ ಸರೋಜ ಅವರು ‘ಮಗ ನಾಪತ್ತೆ’ ಕುರಿತು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಂದೀಪ್ ಅವರು ಕೆಲಸ ಮಾಡಿಕೊಂಡಿದ್ದ ಶಾಮಿಯಾನ ಸರ್ವಿಸ್ನ ಮಾಲಕ ವಿನಯ್ ಅವರಲ್ಲಿ ವಿಚಾರಿಸಿದಾಗ ಸಂದೀಪ್ರವರು ಪ್ರತೀಕ್ ಎಂಬಾತನ ಕಾರಿನಲ್ಲಿ ಹೋಗಿದ್ದ ಕುರಿತು ಮಾಹಿತಿ ನೀಡಿದ್ದರು. ಈ ವಿಚಾರ ತಿಳಿಯುತ್ತಲೇ ಪ್ರತೀಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಂದೀಪ್ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿ ಸಮಗ್ರ ತನಿಖೆಗೆ ಮನವಿ ಮಾಡಿದ್ದರು.