




![]() |
ಠಾಣೆಯ ಬಳಿ ಸೇರಿದ ಪೆರಾಬೆ ಭಾಗದ ನಿವಾಸಿಗಳು |
ಕಡಬ: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕುಮಾರಧಾರ ನದಿಯಲ್ಲಿ ಜೆಸಿಬಿ ಬಳಸಿ ನಡೆಯುವ ಅಕ್ರಮ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರು ಸಿಡಿದೆದ್ದರು. ಚಾರ್ವಾಕ ಭಾಗದಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ನದಿಯ ಮತ್ತೊಂದು ಭಾಗವಾದ ಕಡಬ ತಾಲೂಕಿನ ಪೆರಾಬೆ ಗ್ರಾಮದ ಕುಂಟ್ಯಾನದಿಂದ ಯಾಂತ್ರಿಕೃತ ಬೋಟ್ ಗಳ ಮೂಲಕ ಮರಳುಗಾರಿಕೆ ನಡೆಸಲು ಸಿದ್ದತೆ ಮಾಡಿದ್ದು ಈ ರಸ್ತೆಯಲ್ಲಿ ಬಂದ ಮರಳು ತುಂಬಿದ ಟಿಪ್ಪರನ್ನು ಸ್ಥಳೀಯರು ತಡೆದಿರುವ ಘಟನೆ ಡಿ.5ರಂದು ಸಂಜೆ ನಡೆದಿತ್ತು.
ಕುಂತೂರು- ಅಗತ್ತಾಡಿ- ಕುಂಟ್ಯಾನ ರಸ್ತೆಯು ಇತ್ತೀಚೆಗೆ ಸಾರ್ವಜನಿಕರ ಹೋರಾಟದ ಫಲವಾಗಿ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿತ್ತು. ಮರಳು ತುಂಬಿದ ವಾಹನ ಈ ರಸ್ತೆಯಲ್ಲಿ ಸಾಗಿದರೆ
ರಸ್ತೆ ಸಂಪೂರ್ಣ ಹಾಳಾಗುತ್ತದೆ ಜೊತೆಗೆ ಶಾಲಾ ಮಕ್ಕಳು ಬರುವಾಗ ಕಿರಿದಾದ ದಾರಿಯಿಂದ ಅಪಘಾತ ಸಂಭವಿಸುವ ಸಾಧ್ಯತೆಯನ್ನರಿತು ಸ್ಥಳೀಯರು ತಡೆಯೊಡ್ಡಿದ್ದರು. ಅಲ್ಲದೆ ಗಣಿ
ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಾರದೆ ವಾಹನವನ್ನು ಮುಂದಕ್ಕೆ ಬಿಡುವುದಿಲ್ಲ ಎಂದು ನೆರೆದಿದ್ದ ಜನರು ಪಟ್ಟು ಹಿಡಿದಿದ್ದರು.
![]() |
ತಡೆದಿರುವ ಮರಳು ತುಂಬಿದ ಟಿಪ್ಪರ್ |
ನಂತರದ ಬೆಳವಣಿಗೆಯಲ್ಲಿ ಸ್ಥಳಕ್ಕೆ
ಆಗಮಿಸಿದ ಪೊಲೀಸರು ಮತ್ತು ಅಲ್ಲಿನ ನಿವಾಸಿಗಳ ನಡುವೆ ಮಾತುಕತೆ ನಡೆದಿತ್ತು. ಪರವಾಣಿಗೆ ಇದೆಯೆಂದು ಮರಳು ತುಂಬಿದ ವಾಹನವನ್ನು ಪೊಲೀಸರು ಬಿಟ್ಟಿರುವುದಾಗಿ ತಿಳಿದು ಬಂದಿದೆ.
ಇದೀಗ ಮರಳು ತುಂಬಿದ ವಾಹನವನ್ನು ಬಿಟ್ಟಿರುವ
ವಿಚಾರದಿಂದ ಆಕ್ರೋಶಗೊಂಡ ಪೆರಾಬೆ ಗ್ರಾಮದ ಅಗತ್ತಾಡಿ
ಭಾಗದ ನಿವಾಸಿಗಳು ಠಾಣೆಯ ಆವರಣದಲ್ಲಿ ಅಧಿಕ ಸಂಖ್ಯೆಯಲ್ಲಿ ಸೇರಿದ್ದಾರೆ. ಕುಮಾರಧಾರ ನದಿಯಲ್ಲಿ ಅಕ್ರಮ
ಮರಳುಗಾರಿಕೆ ವಿರುದ್ಧ ಜನಾಕ್ರೋಶ ತೀವ್ರಗೊಂಡರೂ ಗಣಿ ಇಲಾಖೆ ಯಾವುದೇ ಕ್ರಮ ಜರುಗಿಸಿಲ್ಲ ಎಂಬ ಆರೋಪ
ವ್ಯಕ್ತವಾಗಿದೆ.
ಬಿಜೆಪಿ ಪ್ರಭಾವಿ ಮುಖಂಡರೊಬ್ಬರ ನೇತೃತ್ವದ ತಂಡ ಮರಳುಗಾರಿಕೆಯಲ್ಲಿ ತೊಡಗಿದ್ದು, ಬೋಟ್ ಕಟ್ಟಿ ಹಾಕಿದವರ ವಿರುದ್ದ ಅಟ್ರಾಸಿಟಿ ಕೇಸು ದಾಖಲಿಸುವ ಬಗ್ಗೆ ವಾರದ ಹಿಂದೆ ಬೆದರಿಸಿದ್ದರು.
ಇದರಿಂದ ಕೆರಳಿದ ಚಾರ್ವಾಕ ಭಾಗದ ಗ್ರಾಮಸ್ಥರು
ಕಡಬ ಠಾಣೆಗೆ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು. ನಂತರ ಮಾತುಕತೆಯಲ್ಲಿ ಗಣಿ ಇಲಾಖೆ ಸರ್ವೇ ನಡೆಸಿ ವರದಿ ಒಪ್ಪಿಸಿದ ನಂತರವೇ ಮರಳು ಗಣಿಗಾರಿಕೆ ನಡೆಸಬೇಕೆಂದು ಒತ್ತಾಯಿಸಿದ್ದರು. ಮರಳುಗಾರಿಕೆಯಿಂದ ದೈವಸಾನಿಧ್ಯ ನಾಶ ಮತ್ತು ಪ್ರಕೃತಿ ನಾಶವಾದ ಕಾರಣ ಊರವರು ಮರಳುಗಾರಿಕೆಗೆ ವಿರೋಧ ವ್ಯಕ್ತವಾಗಿತ್ತು.