




![]() |
ಕಡಬದ ತಾಲೂಕು ಕಚೇರಿಯಲ್ಲಿ ಸಭೆ ನಡೆದ ಸಂದರ್ಭ |
ಕಡಬ: ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದ್ದರೂ ಕಾನೂನು ಕಾಯ್ದೆಗಳಿಂದಾಗಿ ಅಸ್ಪೃಶ್ಯತೆ ಸಾಕಷ್ಟು ಕಡಿಮೆಯಾಗಿದೆ .ಆದರೂ ಇಂದಿನ ವೈಜ್ಞಾನಿಕ ಯುಗದಲ್ಲೂ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂಬುವುದಕ್ಕೆ ಕಡಬದ ಕೊಂಬಾರು ಗ್ರಾಮದ ದೇವಸ್ಥಾನವೊಂದರಲ್ಲಿ ನಡೆದ ಘಟನೆ ಸಾಕ್ಷಿಯಾದಂತಿದೆ.
ದೇವಸ್ಥಾನದಲ್ಲಿ ಪೂಜೆಯ ಬಳಿಕ ಮಕ್ಕಳ ಕುಣಿತ ಭಜನೆ ಸ್ಥಳೀಯರಿಂದ ನಡೆದಿತ್ತು. ಈ ಸಂದರ್ಭದಲ್ಲಿ ಪರಿಶಿಷ್ಠ ಜಾತಿಗೆ ಸೇರಿದ ಮಕ್ಕಳು ಭಾಗವಹಿಸಿದ್ದರು. ಈ ವೇಳೆ ಮೇಲ್ವರ್ಗದವರು ಎನ್ನಲಾದವರು ಜೊತೆಯಾಗಿ ಬೆರೆಯಲು ಹಿಂಜರಿದು ಅಸ್ಪೃಶ್ಯತೆ ತೋರಿ ಅಗೌರವಯುತವಾಗಿ ನಡೆದುಕೊಂಡು ವಿವಾದಕ್ಕೆ ಮುನ್ನುಡಿ ಬರೆದಿದ್ದರು ಎನ್ನಲಾಗಿದೆ.
ಈ ಘಟನೆ ನಡೆದ ಬಳಿಕ ಗ್ರಾಮದ ಪರಿಶಿಷ್ಠ ಜಾತಿ ಸಮುದಾಯವರಿಂದ ವಿರೋಧದ ಅಲೆ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಯಾಚಿಸುವ ಮೂಲಕ ತೆರೆ ಎಳೆಯುವ ಪ್ರಯತ್ನ ಮಾಡಲಾಗಿತ್ತು. ಸದ್ಯ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯಲ್ಲಿ ಪ್ರಸ್ತಾಪಗೊಂಡು ಚರ್ಚೆಯಾಗಿದೆ.
ಕಡಬದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಪ್ರಭಾಕರ ಖಜೂರೆ ಅಧ್ಯಕ್ಷತೆಯಲ್ಲಿ , ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಸೇರಿದಂತೆ ಅಧಿಕಾರಿಗಳು ಸೇರಿದ್ದ ಸಭೆಯಲ್ಲಿ ಪ್ರಸ್ತಾಪಿಸಿದ ಮುಖಂಡರು ವಿದ್ಯಾವಂತ ಸಮುದಾಯದಲ್ಲೂ ಈ ರೀತಿಯ ನಿಂದನೆ ಮುಂದುವರಿದರೆ ದೇವಸ್ಥಾನದ ಆಡಳಿತ ಮಂಡಳಿಯನ್ನು ಹೊಣೆ ಮಾಡಬೇಕಾಗುತ್ತದೆ . ಕೊಂಬಾರು ಗ್ರಾಮ ಮಾತ್ರವಲ್ಲ ಬೇರೆ ಕಡೆಯೂ ಇಂತಹ ಕೀಳು ಮನಸ್ಥಿತಿಯವರು ಇದ್ದಾರೆ. ಕೇಸು ದಾಖಲಿಸಿ ಅವರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಲು ನಾವು ತಯಾರಿಲ್ಲ, ಆದರೆ ಇಂತಹ ಕೀಳು ಮನೋಸ್ಥಿತಿ ಬದಲಾಯಿಸಲು ತಹಶೀಲ್ದಾರ್ ಅವರು ಸೂಕ್ತ ಸಲಹೆ ನೀಡಿ, ನೋಟಿಸ್ ಮೂಲಕ ಆಡಳಿತ ಮಂಡಳಿಯನ್ನು ಎಚ್ಚರಿಸಬೇಕೆಂದು ಒತ್ತಾಯಿಸಿದರು.
ನಡೆದ ಘಟನೆ ಏನು: ಕಡಬ ತಾಲೂಕಿನ ಕೊಂಬಾರು ಗ್ರಾಮದ ದೇವಸ್ಥಾನವೊಂದರಲ್ಲಿ ಇತ್ತೀಚೆಗೆ ಪೂಜೆಯ ಬಳಿಕ ಕುಣಿತ ಭಜನಾ ವೇಳೆ ಮೇಲ್ವರ್ಗದವರೆಂದು ಹೇಳಲಾಗುತ್ತಿರುವ ಕೆಲವರು ಅಸ್ಪೃಶ್ಯತೆ ತೋರಿ ಅಗೌರವಯುತವಾಗಿ ನಡೆದುಕೊಂಡಿದ್ದರು. ಈ ವಿಚಾರ ಪುರೋಹಿತರ ಗಮನಕ್ಕೆ ಬರುತ್ತಿದ್ದಂತೆ ನಿಂದನೆಗೈದವರನ್ನು ಕರೆಸಿ ನೊಂದವರ ಮುಂದೆ ಕ್ಷಮೆಯಾಚಿ ವಿವಾದಕ್ಕೆ ತೆರೆ ಎಳೆದಿದ್ದರು ಎನ್ನಲಾಗಿದೆ . ಸಮಾನತೆಯನ್ನು ಬಯಸುವ ಊರಿನ ಪ್ರಜ್ಞಾವಂತ ನಾಗರಿಕರು ಸೇರಿ ಕೀಳು ಮನಸ್ಥಿತಿಯ ಜನರಿಗೆ ಮನುಷ್ಯತ್ವದ ,ಮಾನವಿಯ ಮೌಲ್ಯದ ತಿರುಳನ್ನು ತಿಳಿಯಪಡಿಸುವ ಜವಾಬ್ದಾರಿಯ ಅಗತ್ಯವಿದೆ ಎಂಬ ಅಭಿಪ್ರಾಯ ದಲಿತ ಸಮುದಾಯದ ಹಿತ ಚಿಂತಕರಿಂದ ವ್ಯಕ್ತವಾಗಿದೆ.