



ಕಡಬ ಟೈಮ್, ಪುತ್ತೂರು: ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬಳು ಸೋಮವಾರ ಬೆಳಗ್ಗೆ ನೋವಿನ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದಕ್ಕೆ ಶಿಕ್ಷಕರ ಕಿರುಕುಳದ ಕಾರಣ ಎಂದು ಆಕೆಯ ತಂದೆ ಆರೋಪಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಕಲ್ಲೇರಿ ಮೂಲದ, ಸದ್ಯ ಪಡೀಲಿನಲ್ಲಿದ್ದು ಪುತ್ತೂರು ನಗರದ ಸರಕಾರಿ ಪ್ರೌಢಶಾಲೆಯೊಂದರಲ್ಲಿ ಹತ್ತನೆ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದವಳು.
ಶಾಲೆ ನಿರಂತರವಾಗಿ ಶೇ. 100 ಫಲಿತಾಂಶ ಪಡೆಯುತ್ತಿದೆ. ನಿಮ್ಮ ಪುತ್ರಿ ಸರಿಯಾಗಿ ಕಲಿಯುತ್ತಿಲ್ಲ. ಇದರಿಂದ ಶಾಲಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ದೂರವಾಣಿ ಮೂಲಕ ಹೇಳುತ್ತಿದ್ದರು. ಪ್ರತಿದಿನ ಮಗಳಿಗೆ ಒಂದಲ್ಲ ಒಂದು ಕಾರಣನೀಡಿ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ವಿದ್ಯಾರ್ಥಿನಿಯ ತಂದೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಸದ್ಯ ವಿದ್ಯಾರ್ಥಿನಿಯು ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದು ಬಂದಿದೆ.