



ಕಡಬ ಟೈಮ್ಸ್ ನೆಲ್ಯಾಡಿ: ಪ್ರತಿ ವರ್ಷವೂ ಸಾಂತಾ ಕ್ಲಾಸ್ ವೇಷ ಧರಿಸಿ, ಅಲಂಕೃತ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾ ಕ್ರಿಸ್ತ ಜನನದ ಶುಭವಾರ್ತೆ ಪಸರಿಸುವ ಜತೆಗೆ ಪರಿಸರ ಜಾಗೃತಿ ಮೂಡಿಸುವ ಕೊಕ್ಕಡ ನಿವಾಸಿ ವಿನ್ಸೆಂಟ್ ಮಿನೇಜಸ್ ಅವರು ಈ ವರ್ಷವೂ ತಿರುಗಾಟ ಆರಂಭಿಸಿದ್ದಾರೆ.
ಕಳೆದ ಗುರುವಾರ ತನ್ನ ಊರು ಕೊಕ್ಕಡದಿಂದ ಹೊರಟ ಅವರು, ಉಪ್ಪಿನಂಗಡಿ, ಬಂಟ್ವಾಳ ಪರಿಸರದಲ್ಲಿ ಮೂಲಕ ಮಂಗಳೂರಿಗೆ ತೆರಳಿದ್ದು ಶಾಲೆ, ಕಾಲೇಜುಗಳಿಗೆ ಹೋಗಿ ಮನೋರಂಜನೆ ಯೊಂದಿಗೆ ಪರಿಸರ ಸಂರಕ್ಷಣೆಯ ಸಂದೇಶ ಸಾರುತ್ತಿದ್ದಾರೆ. ಜತೆಗೆ ಕೆಲವೆಡೆ ಕ್ರಿಸ್ಮಸ್ ಕೇಕ್ ಕೂಡಾ ವಿತರಿಸುತ್ತಿದ್ದಾರೆ.
ಅವರ ತಿರುಗಾಟಕ್ಕೆ ಈ ಬಾರಿ 25ನೇ ವರ್ಷ ತುಂಬಿದ್ದು ಇದರಲ್ಲಿ ನನಗೆ ಅತೀವ ಸಂತೋಷ ಸಿಗುತ್ತದೆ. ಸೌಹಾರ್ದಯುತವಾಗಿ ಕ್ರಿಸ್ಮಸ್ ಆಚರಣೆಗೆ ಪ್ರೇರಣೆಯಾಗುತ್ತಿದೆ. ಸಾರ್ವಜನಿಕರ ಸಹಕಾರ ಅತ್ಯುತ್ತಮವಾಗಿದೆ ಎನ್ನುತ್ತಾರೆ ವಿನ್ಸೆಂಟ್ ಮಿನೇಜಸ್
ಸಾಂತಾ ಕ್ಲಾಸ್ ವೇಷ ಧರಿಸಿರುವ ವಿನ್ಸೆಂಟ್ ಮಿನೇಜಸ್
ವಿನ್ಸೆಂಟ್ ಅವರು 1994ರಿಂದ ಕ್ರಿಸ್ಮಸ್ ಸಂದರ್ಭದಲ್ಲಿ ಚರ್ಚ್ ನಲ್ಲಿ ಸಾಂತಕ್ಲಾಸ್ ವೇಷ ಧರಿಸಿ ಸಂದೇಶ ನೀಡುತ್ತಿದ್ದರು. ಕೊಕ್ಕಡ ಚರ್ಚ್ ಧರ್ಮಗುರುಗಳಾಗಿದ್ದ ವಂ| ವಲೇರಿಯನ್ ಲೂವಿಸ್ ಅವರು ಸಾರ್ವಜನಿಕ ವಾಗಿ ಈ ಕೆಲಸ ಮಾಡುವಂತೆ ಸಲಹೆ ನೀಡಿದ ಬಳಿಕ 2000ದಲ್ಲಿ ಅವರ ಸಂಚಾರ ಶುರುವಾಗಿದೆ. ಮೊದಲ ಬಾರಿಗೆ ಕೊಕ್ಕಡದಿಂದ ಶಿರಾಡಿವರೆಗೆ ದ್ವಿಚಕ್ರ ವಾಹನದ ಮೂಲಕ ತೆರಳಿದ ಅವರ ವ್ಯಾಪ್ತಿ ಈಗ ವಿಸ್ತಾರಗೊಂಡಿದೆ.
ನಿರಂತರ ಸಾಂತಾ ಕ್ಲಾಸ್ ವೇಷ ಧರಿಸುತ್ತಿರುವ ವಿನ್ಸೆಂಟ್ ಈ ಬಾರಿ ಇನ್ನಷ್ಟು ವಿಭಿನ್ನತೆ ತೋರಿದ್ದಾರೆ. ತಮ್ಮ ದ್ವಿಚಕ್ರ ವಾಹನವನ್ನು ಬಲೂನ್ ಗ ಳಿಂದ ಅಲಂಕರಿಸಿರುವ ಅವರು, ‘ಪ್ಲಾಸ್ಟಿಕ್ ಮುಕ್ತಗೊಳಿಸಿ ಪರಿಸರ ಉಳಿಸಿ’, ‘ಡ್ರಗ್ಸ್ ಮುಕ್ತ ಜೀವನ ನಡೆಸಿ’, ‘ಸ್ವತ್ಛ ಭಾರತಕ್ಕೆ ಗಿಡ ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಿ’ ಎಂಬ ಘೋಷಣೆಗಳನ್ನು ವಾಹನಕ್ಕೆ ಅಳವಡಿಸಿದ್ದಾರೆ. ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ.