


![]() |
ಕೊಲೆಯಾದ ಪೆರ್ಲ ನಿವಾಸಿ ರಮೇಶ್ ಗೌಡ |
ಕಡಬ ಟೈಮ್, ನೆಲ್ಯಾಡಿ:
ಇಲ್ಲಿನ ನೆಲ್ಯಾಡಿ ಹೊರ ಠಾಣಾ ವ್ಯಾಪ್ತಿಯ ಗೋಳಿತೊಟ್ಟು ಗ್ರಾಮದಲ್ಲಿ ದಾರಿ ವಿವಾದಕ್ಕೆ
ಸಂಬಂಧಿಸಿ ಉಂಟಾದ ಜಗಳ ಸಂಬಂಧಿಯನ್ನೇ ಕತ್ತಿಯಿಂದ ಕಡಿದು
ಕೊಲೆಗೈಯುವ ಹಂತಕ್ಕೆ ಹೋಗಿ ನಾಗರಿಕ
ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ.
ಆಲಂತಾಯ ಗ್ರಾಮದ
ಪೆರ್ಲ ನಿವಾಸಿ ರಮೇಶ್ ಗೌಡ (51) ಅವರು ಕೊಲೆಯಾದವರು. ಅವರ ಮನೆ ಸಮೀಪದ ನಿವಾಸಿ, ದೂರದ ಸಂಬಂಧಿಯೂ ಆಗಿರುವ ಹರೀಶ್ ಗೌಡ (38) ಕೊಲೆಗೈದ ಆರೋಪಿ ಇಬ್ಬರೊಳಗೆ ದಾರಿಗೆ ಸಂಬಂಧಿಸಿ ಶುಕ್ರವಾರ ಬೆಳಗ್ಗಿನಿಂದಲೇ ಮಾತಿನ ಚಕಮಕಿ ನಡೆದಿತ್ತೆನ್ನಲಾಗಿದ್ದು, ಇದು ವಿಕೋಪಕ್ಕೆ ತಿರುಗಿ ಕೊಲೆಗೈಯುವ ಹಂತಕ್ಕೆ ತಲುಪಿದೆ.
ಕೊಲೆಯಾದ ರಮೇಶ್ ಅವರು ಪೆರ್ಲ ದೇಗುಲದಲ್ಲಿ ಶುಕ್ರವಾರ ರಾತ್ರಿ ನಡೆಯುವ ಭಜನ ಸೇವೆಯಲ್ಲಿ ಭಾಗವಹಿಸುವ ಸಲುವಾಗಿ ಹೂವುಗಳನ್ನು ಸಂಗ್ರಹಿಸಿ ಬೈಕ್ನಲ್ಲಿ ಮನೆಯಿಂದ ಹೊರಟು ಸುಮಾರು 50 ಮೀಟರ್ ದೂರಕ್ಕೆ ಹೋದಾಗ ಅಲ್ಲಿಗೆ ಮೊದಲೇ ಬಂದು ನಿಂತಿದ್ದ ಹರೀಶ ಗೌಡ ಕತ್ತಿಯಿಂದ ಕಡಿದಿದ್ದಾನೆ. ಹಲ್ಲೆಗೀಡಾದ ರಮೇಶ ಅವರು ಬೈಕನ್ನು ಬಿಟ್ಟು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ, 200 ಮೀಟರ್ನಷ್ಟು ದೂರ ಬೆನ್ನಟ್ಟಿಕೊಂಡೇ ಹೋದ ಹರೀಶ್ ಮತ್ತೆ ಮತ್ತೆ ಕಡಿದು ಗಂಭೀರವಾಗಿ ಗಾಯಗೊಳಿಸಿ ಹತ್ಯೆಗೈದಿದ್ದ.
ಮನೆ ಸಮೀಪ ಬೈಕ್ ಬಿದ್ದಿದ್ದರೆ, ಬೈಕಿನಿಂದ ಸುಮಾರು 200 ಮೀಟರ್ ದೂರದಲ್ಲಿ ಮೃತದೇಹ ಬಿದ್ದಿತ್ತು. ಆರೋಪಿ ಹರೀಶ್ ಗೌಡ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪೂಜೆಗೆಂದು
ಹೊರಟವರು ಬೀದಿ ಹೆಣವಾಗಿ ಬಿದ್ದಿರುವುದು ಇಡೀ ಗ್ರಾಮಸ್ಥರನ್ನೇ ಬೆಚ್ಚಿಬೀಳಿಸಿದೆ, ಆರೋಪಿಗೆ ಸೂಕ್ತ
ಕಾನೂನಿನಲ್ಲಿ ಶಿಕ್ಷೆಯಾಗಲಿ, ಇಂತಹ ಘಟನೆ ಮತ್ತೆಂದೂ ಮರಕಳುಹಿಸದಿರಲಿ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.