




![]() |
ಯಕ್ಷ ಬೊಳ್ಳಿ ದಿನೇಶ್ ರೈ ಕಡಬ |
ಕಡಬ ಟೈಮ್: ಕರಾವಳಿಯ ಯಕ್ಷರಂಗದಲ್ಲಿ ಯಕ್ಷ ಬೊಳ್ಳಿ ಕಡಬ ದಿನೇಶ್ ರೈ ಅವರ ಹೆಸರು ಕೇಳದವರಿಲ್ಲ. ಸರಳ ಸಜ್ಜನಿಕೆಯ ವ್ಯಕ್ತಿತ್ವ, ಸ್ನೇಹಪರ ಜೀವಿ, ಹಾಸ್ಯ ಕಲಾವಿದರಾಗಿ ಮಿಂಚುತ್ತಿರುವ ಇವರ ಕಲಾಯಾನದ ರಜತ ಸಂಭ್ರಮ ಸಮೀಪಿಸುತ್ತಿದ್ದು ಇದರ ಸವಿ ನೆನಪಿಗಾಗಿ ಕಡಬದಲ್ಲಿ ಬೊಳ್ಳಿ ಪರ್ಬ-25 ಕಡಬ ಯಕ್ಷ ಬೊಳ್ಳಿ ಸಂಭ್ರಮ ನಡೆಸಲು ತೀರ್ಮಾನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕಡಬದ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಸಮಾನ ಮನಸ್ಕರ ತಂಡದ ಪಾಲ್ಗೊಳ್ಳುವಿಕೆಯಲ್ಲಿ ಸೆ.2ರಂದು ಪೂರ್ವಭಾವಿ ಸಭೆ ನಡೆದಿದೆ. ಮುಂದಿನ ಜನವರಿ ತಿಂಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ಹುಟ್ಟೂರಿನಲ್ಲೇ ಊರ ಅಭಿಮಾನಿಗಳ ಸಹಕಾರ,ಪಾಲ್ಗೊಳ್ಳುವಿಕೆಯೊಂದಿಗೆ ಈ ಸಂಭ್ರಮ ಕಾರ್ಯಕ್ರಮ ನಡೆಸಲು ಉದ್ದೇಶಿಸಿರುವುದಾಗಿ ಕಡಬ ದಿನೇಶ್ ರೈ ಹೇಳಿದರು. ಅಲ್ಲದೆ ಯಕ್ಷ ತೆಲಿಕೆ ಜೊತೆಗೆ ಹೆಸರಾಂತ ಮೇಳದಿಂದ ಯಕ್ಷಗಾನ ಬಯಲಾಟ ನಡೆಯಲಿರುವುದಾಗಿ ಮಾಹಿತಿ ನೀಡಿದರು .
ಸಭೆಯಲ್ಲಿ ಅರುಣ್ ಪಿಜಕ್ಕಳ, ಕಿಶನ್,ಚಂದ್ರಹಾಸ ರೈ, ಮೇದಪ್ಪ ಗೌಡ, ವಾಸುದೇವ ರೈ ಬೆಳ್ಳಾರೆ, ರತ್ನಾ
ವೆಂಕಟೇಶ್, ಕೈಮಲ ಎಡಮಂಗಲ, ಕೃಷ್ಣಪ್ಪ ಅಮೈ, ಸುಂದರ ಅಂಗಣ, ಸುರೇಶ್ ಕಡಬ, ಪರ್ತಕರ್ತ ವಿ.ಕೆ ಕಡಬ
ಸೇರಿದಂತೆ ಪ್ರಮುಖರು ಸೂಕ್ತ ಸಲಹೆ ಸೂಚನೆ ನೀಡಿದರು.
![]() |
ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದವರು |
ದಿನೇಶ್ ರೈ ಅವರ ಪರಿಚಯ: ಕಡಬ
ತಾಲೂಕಿನ ಐತ್ತೂರು ಗ್ರಾಮದ ಬೆತ್ತೋಡಿ-ಮಾಳ ಶ್ರೀವರದ ರೈ, ಶ್ರೀಮತಿ ವಾರಿಜ ರೈ ದಂಪತಿಯರ ಮಗ. ಪ್ರೌಢಶಾಲೆಯಲ್ಲಿ
ವಿದ್ಯಾಭ್ಯಾಸ ನಿಲ್ಲಿಸಿ ಶ್ರೀ
ಧರ್ಮಸ್ಥಳ ಲಲಿತಕಲಾ ಕೇಂದ್ರವನ್ನು ಸೇರಿ, ಗುರು ತಾರನಾಥ ಬಲ್ಯಾಯ ವರ್ಕಾಡಿಯವರಿಂದ ನಾಟ್ಯಭ್ಯಾಸ ಮಾಡಿ ಯಕ್ಷರಂಗವನ್ನು ಪ್ರವೇಶ ಮಾಡಿ ಶ್ರೀ
ಧರ್ಮಸ್ಥಳ ಮೇಳ-1 ವರ್ಷ, ಶ್ರೀ ಕಟೀಲು ಮೇಳ-3 ವರ್ಷ, ಶ್ರೀ ಪುತ್ತೂರು ಮೇಳ-1 ವರ್ಷ, ಶ್ರೀ ಕುಂಟಾರು ಮೇಳ-2 ವರ್ಷ, ಶ್ರೀ ಮಂಗಳಾದೇವಿ ಮೇಳ-4 ವರ್ಷ, ತೆಂಕು-ಬಡಗು ಸಮ್ಮಿಶ್ರಗೊಂಡ ಶ್ರೀ ಹಿರಿಯಡ್ಕ ಮೇಳ-3 ವರ್ಷ, ತಳಕಲ ಮೇಳ-2 ವರ್ಷ ತಿರುಗಾಟ ಮಾಡಿರುವುದಲ್ಲದೆ, ಶ್ರೀಸಾಲಿಗ್ರಾಮ ಮೇಳ, ಶ್ರೀ ಸುಂಕದಕಟ್ಟೆ ಮೇಳ, ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಬಾಚಕೆರೆ ಯಲ್ಲಿ ಅತಿಥಿಯಾಗಿ ಭಾಗವಹಿಸುತ್ತಿದ್ದರು. ಪ್ರಸ್ತುತ
ಕಳೆದ ಮೂರು ವರ್ಷಗಳಿಂದ ಗೆಜ್ಜೆಗಿರಿ
ಮೇಳದಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ.
ರವಿಕುಮಾರ್ ಸುರತ್ಕಲ್ ರಚಿಸಿದ ನಾಗತಂಬಿಲದ ’ಕೂಸಮ್ಮ’(ನಂಜುಂಡ)ನ ಪಾತ್ರ ಯಕ್ಷರಂಗದಲ್ಲಿ ಹೊಸ ತಿರುವು ತಂದುಕೊಟ್ಟಿತು. ನಾಗರ ಪಂಚಮಿಯ ’ನೋಣಯ್ಯ’, ವಜ್ರ ಕುಟುಂಬದ -ಕಪಟ ಸ್ವಾಮೀಜಿ’, ಪವಿತ್ರ-ಪಲ್ಲವಿಯ-ಪದ್ಮಾವತಿ’(ಪದ್ದು), ಚೆನ್ನಿ-ಚೆನ್ನಮ್ಮದ-’ಪುರುಷೋತ್ತಮ’, ವಿಜಯ-ಕೇಸರಿಯ-’ಮಾರುತಿ’, ಜೀವನ ಚಕ್ರದ-’ನಿಷ್ಟಾವಂತ ಸೇವಕ’, ಗುಳಿಗೋದ್ಬವ ಪಂಜುರ್ಲಿ ಪ್ರತಾಪದ-‘ಗೋಪಾಲ’ ಹಾಗೂ ’ಚಂದ್ರ’ ಮನಸೂರೆಗೊಂಡ ಪಾತ್ರಗಳು.
ತೆಂಕು-ಬಡಗಿನಲ್ಲಿ, ತುಳು-ಕನ್ನಡದಲ್ಲಿ, ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಯಾವುದೇ ಪ್ರಸಂಗವಾದರೂ ತನಗೆ ಸಿಕ್ಕಿದ ಪಾತ್ರಗಳ ಅಧ್ಯಯನ ಮಾಡಿ, ಹಿರಿಯ-ಕಿರಿಯ ಕಲಾವಿದರಿಂದ ಕೇಳಿ ತಿಳಿದು, ಕತೆಗೆ ಲೋಪ ಬಾರದಂತೆ ತನ್ನದೇ ಶೈಲಿಯ ಹಾಸ್ಯದಲ್ಲಿ ಜನರನ್ನು ರಂಜಿಸುತ್ತಾರೆ. ಚಂದನ ವಾಹಿನಿಯಲ್ಲಿ ಪ್ರಸಾರವಾದ ಪಾಪೋದ ಪಿರವು, ಸಜ್ಜಿಗೆ-ಬಜಿಲ್ ತುಳು ಧಾರಾವಾಹಿಯಲ್ಲಿ, ‘ವಿಜಯ ಕಲಾವಿದರು ಕಿನ್ನಿಗೋಳಿ’ಯವರ ಲೈಫ್ ಕೊರ್ಪರ ನಾಟಕದಲ್ಲಿ ನಟಿಸಿದ್ದಾರೆ. ಕುಡಲ ತೆಲಿಪಾಗದಲ್ಲಿ ಭಾಗವಹಿಸುವುದರೊಂದಿಗೆ ’ಬಲೇ ತೆಲಿಪಾಲೆ’ಪ್ರವೇಶಿಸಿದ ಪ್ರಥಮ ಯಕ್ಷಗಾನ ಕಲಾವಿದ ಎಂಬ ಕೀರ್ತಿ ಇವರಿಗೆ ಸಲ್ಲುತ್ತದೆ.ನಮ್ಮ ತುಳುನಾಡ್ ಟ್ರಸ್ಟ್(ರಿ)ಇದರ ಅಧ್ಯಕ್ಷರಾಗಿ ಸಾಮಾಜಿಕವಾಗಿ ಅಳಿಲ ಸೇವೆ ಮಾಡುತ್ತಿದ್ದಾರೆ.
ಹಿರಿಯರು-ಕಿರಿಯರು ಅನ್ನೋ ಭೇದ ಭಾವ ಇಲ್ಲದೆ ಎಲ್ಲರನ್ನು ಸಮಾನ ರೀತಿಯಲ್ಲಿ ಗೌರವಿಸುವ ಗುಣವುಳ್ಳವರು.ಕಲಾಭಿಮಾನಿಗಳು ದೇವರು ಎನ್ನುತಾ ಹಿರಿಯರನ್ನು ಗೌರವಿಸಿ, ಕಿರಿಯರೊಡನೆ ಪ್ರೀತಿಯಿಂದ ಮಾತನಾಡುತ್ತಾರೆ. ಅವಕಾಶ ಕೊಟ್ಟ ಯಜಮಾನರುಗಳನ್ನು, ತಪ್ಪುಗಳನ್ನು ತಿದ್ದಿ ಸರಿಯಾದ ಮಾರ್ಗದರ್ಶನ ಮಾಡಿದ ಹಿರಿಯ-ಕಿರಿಯ ಕಲಾವಿದರನ್ನು, ಭಕ್ತಿಯಿಂದ ಸ್ಮರಿಸುವ ಇವರು. ರಂಗದಲ್ಲಿ ಎಷ್ಟು ಹಿರಿಯ ಕಲಾವಿದನಾಗಲಿ ಅಥವಾ ಕಿರಿಯ ಕಲಾವಿದನೇ ಆಗಿರಲಿ ಅವರಿಗೆ ಅನುಸಾರವಾಗಿ ತನ್ನದೇ ಶೈಲಿಯಲ್ಲಿ ಹಾಸ್ಯವನ್ನು ಪ್ರಕಟಿಸುವ ಇವರು ಸಂದರ್ಭಕ್ಕೆ ಸರಿಯಾಗಿ ಸಹಕರಿಸುವ ಮನೋಭಾವವುಳ್ಳವರು.
ಯಕ್ಷ ಬೊಳ್ಳಿ ಬಿರುದಾಂಕಿತ ಇವರಿಗೆ ಅಜೆಕಾರು ಕಲಾಭಿಮಾನಿಗಳ ಬಳಗ (ರಿ) ಮುಂಬೈ ಯಕ್ಷರಕ್ಷಾ ಪ್ರಶಸ್ತಿ-2017 ಬೆಂಗಳೂರು ಬಂಟರ ಸಂಘದ ಯುವ ಬಂಟ್ಸ್ ವತಿಯಿಂದ, ಬಂಟ ಸಮ್ಮಿಲನ ಐಕ್ಯತಾ-2018 ರಲ್ಲಿ ಬಂಟ್ಸ್ ಯಂಗ್ ಅಚೀವರ್ಸ್-2018 ಪ್ರಶಸ್ತಿಯೊಂದಿಗೆ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದಾರೆ.