ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ: ನಿಯಂತ್ರಣ ಮಾಡಬೇಕಾದವರು ಯಾರು?

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ: ನಿಯಂತ್ರಣ ಮಾಡಬೇಕಾದವರು ಯಾರು?

Kadaba Times News

ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ  ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು,ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಇದೀಗ ಇಲ್ಲಿನ ಮಿನಿ ವಿಧಾನ ಸೌಧದ ಬಳಿ ನಾಯಿ ಅಡ್ಡ ಬಂದು ಸ್ಕೂಟಿ ಸವಾರೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ  ಘಟನೆಗೆ ಸೆ.27ರಂದು ನಡೆದಿದೆ.



ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕು ಪ್ರಾಣಿಗಳು ರಸ್ತೆಯಲ್ಲೇ ನಿತ್ಯ ಓಡಾಡಿ ಹಲವು ಅಪಘಾತಗಳು ಸಂಭಿಸಿತ್ತು.ಬಳಿಕ ಸಾಕುಪ್ರಾಣಿಗಳನ್ನು ಬಂಧಿಸುವ ಮೂಲಕ ಎಚ್ಚರಿಕೆ ನೀಡಲಾಗಿತ್ತು.  ಇದೀಗ ಬೀದಿ ನಾಯಿಗಳು ಪೇಟೆಯುದ್ದಕ್ಕೂ ಬೀಡುಬಿಟ್ಟಿದೆ. ಆಸ್ಪತ್ರೆ, ಪೊಲೀಸ್ ಠಾಣೆ, ಪಟ್ಟಣ ಪಂಚಾಯತ್ ವಠಾರ, ತಹಶೀಲ್ದಾರ್ ವಠಾರ, ಹೀಗೆ ಜನರು ನಿತ್ಯ ಓಡಾಡುವ ಸ್ಥಳಗಳಲ್ಲಿ ಬೀದಿ ನಾಯಿಗಳ ಹಿಂಡು ಓಡಾಡುತ್ತಿವೆ. ಎಷ್ಟೋ ಬಾರಿ ದ್ವಿಚಕ್ರ ವಾಹನ ಸವಾರರು ನಾಯಿ ಅಡ್ಡ ಬಂದು ಮತ್ತು  ದಾಳಿಗೆ ಹೆದರಿ ರಸ್ತೆ ಮೇಲೆ ಬಿದ್ದು ಗಾಯಗೊಳ್ಳುತ್ತಿರುವುದು ಸಾಮಾನ್ಯವಾಗಿದೆ.


ಪ್ರಾಣಿಗಳ ಆರೋಗ್ಯ ಕ್ಷೇಮ ಮತ್ತು ನಿಯಂತ್ರಣದ ಬಗ್ಗೆ ನಿಗದಿತ ವ್ಯವಸ್ಥೆ ಇಲ್ಲ. ಪ್ರಾಣಿಗಳ ನಿಯಂತ್ರಣಕ್ಕೂ ನಿಗದಿತ ವ್ಯವಸ್ಥೆ ಇಲ್ಲದಿರುವುದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಸ್ಥಳೀಯ ಸಂಸ್ಥೆಗಳು ಪ್ರತಿ ವರ್ಷವೂ ತಮ್ಮ ವ್ಯಾಪ್ತಿಯ ಪ್ರದೇಶದ ಬೀದಿ ನಾಯಿ ಸಂತಾನ ನಿಯಂತ್ರಣಕ್ಕೆ ಅವಶ್ಯವಿರುವ ಅನುದಾನವನ್ನು ಆಯವ್ಯಯದಲ್ಲಿ ಮೀಸಲಿರಿಸಿ ಅವುಗಳ ನಿಯಂತ್ರಣಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು.ಆದ್ರೆ ಇದರ ಅನುಷ್ಟಾನ ಸಮರ್ಪಕವಾಗಿ ಆಗಿಲ್ಲ. ಪ್ರತಿ ವರ್ಷ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಮತ್ತು ಶಸ್ತ್ರ ಚಿಕಿತ್ಸೆ ಮಾಡಲು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ, ಪಾಲನೆ ಎಷ್ಟಾಗುತ್ತಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ.


ಭಾರತದಲ್ಲಿರುವ ಕಾನೂನುಗಳು ಬೀದಿ ನಾಯಿಗಳ ಪರವಾಗಿಯೇ ಇವೆ.  ಬೀದಿ ನಾಯಿಗೆ ಬೀದಿಯಲ್ಲಿ ವಾಸಿಸುವ ಎಲ್ಲ ಹಕ್ಕುಗಳಿವೆ. ಭಾರತದಲ್ಲಿ 2001 ರಿಂದಲೂ ಬೀದಿ ನಾಯಿಗಳ ಹತ್ಯೆಯನ್ನು ನಿಷೇಧಿಸಲಾಗಿದೆ. ಅಂದ ಹಾಗೆ 2008ರಲ್ಲಿ ಮುಂಬಯಿ ಮಹಾನಗರ ಪಾಲಿಕೆಯು ಬೀದಿ ನಾಯಿಗಳನ್ನು ಹತ್ಯೆ ಮಾಡಲು ಮುಂದಾಗಿತ್ತು. ಇದಕ್ಕೆ ಬಾಂಬೆ ಹೈಕೋರ್ಟ್ ಒಪ್ಪಿಗೆಯನ್ನೂ ನೀಡಿತ್ತು. ಆದರೆ ಇದನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು.


ಭಾರತೀಯ ಸಂವಿಧಾನದ ಆರ್ಟಿಕಲ್ 51(ಜಿ) ಪ್ರಕಾರ, ಭಾರತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಪ್ರಾಣಿಯನ್ನು ಕಾಪಾಡಬೇಕು ಮತ್ತು ಇತರೆ ಜೀವವಿರುವ ಪ್ರಾಣಿಗಳ ಬಗ್ಗೆ ದಯೆ ಹೊಂದಿರಬೇಕು.  ಇದರ ಜತೆಗೆ ಬೀದಿ ನಾಯಿಗಳಿಗೆ ಆಹಾರ ಒದಗಿಸುವುದು ಕಾನೂನು ಬದ್ಧವಾಗಿಯೇ ಇದೆ. ಕಾನೂನಿನ ಪ್ರಕಾರ, ಬೀದಿ ನಾಯಿಗಳನ್ನು ಅವುಗಳಿರುವ ಆವಾಸ ಸ್ಥಾನದಿಂದ ತೆರವು ಗೊಳಿಸುವಂತಿಲ್ಲ. ಆದರೆ ಮಹಾನಗರ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳು ಅಥವಾ ಸರ್ಕಾರೇತರ ಸಂಸ್ಥೆಗಳು ಅವುಗಳನ್ನು ತೆಗೆದುಕೊಂಡು ಹೋಗಿ, ಅವುಗಳಿಗೆ ಜನನ ನಿಯಂತ್ರಣ ಚುಚ್ಚುಮದ್ದು ಹಾಕಿಸಿ, ಅವುಗಳು ಎಲ್ಲಿದ್ದವೋ ಅಲ್ಲಿಗೇ ತಂದು ಬಿಡಬೇಕು ಎಂಬ ಕಾನೂನು ಇದೆ.ಆದರೆ ವಿಚಾರದಲ್ಲಿ ಪಟ್ಟಣ ಪಂಚಾಯತ್  ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಬೀದಿ ನಾಯಿಗಳ ಹಾವಳಿಯನ್ನು ಇಲ್ಲಿಯವರೆಗೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.


ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಮಾಡುವುದು ಸುಲಭವಲ್ಲ,  ಆದರೆ ಎಲ್ಲರ ಸಹಕಾರದಿಂದ ಅದು ಸಾಧ್ಯ. ನಾಗರಿಕರು ಪ್ರಾಣಿಗಳನ್ನು ಸೆರೆಹಿಡಿಯುವಲ್ಲಿ ಮತ್ತು ಸಂತಾನಹರಣಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ನಾಯಿಯನ್ನು ಸೆರೆಹಿಡಿದು, ಸಂತಾನಹರಣ ಮಾಡಿ ಅದೇ ಸ್ಥಳದಲ್ಲಿ ಬಿಡಲಾಗುತ್ತದೆ. ಇದರಿಂದ ಬೀದಿನಾಯಿಗಳ ಸಂಖ್ಯೆ ಕೂಡ ನಿಯಂತ್ರಣದಲ್ಲಿರಲು ಸಾಧ್ಯವಿದೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top