


ಕಡಬ ಟೈಮ್ಸ್: ಆಗಸ್ಟ್ 4 ರಂದು ತುಳುನಾಡಿನಲ್ಲಿ( ದಕ್ಷಿಣ ಕನ್ನಡ/ಉಡುಪಿ ಜಿಲ್ಲೆ) ‘ಆಟಿ ಅಮಾವಾಸ್ಯೆ ಆಚರಣೆ ಮಾಡಲಾಗುತ್ತಿದೆ. ಅಪರೂಪದ ಸಾಂಪ್ರದಾಯಿಕ ತಿನಿಸುಗಳ ಜೊತೆಗೆ ಹಾಳೆ ಮರ( ಪಾಲೆದ ಮರ)ದ ಕಷಾಯ ಕುಡಿಯುವುದು ವಿಶೇಷ.
ಔಷಧೀಯ ಗುಣಗಳನ್ನೊಳಗೊಂಡ ಈ ಕಷಾಯವನ್ನು ಕೆಲ ದೇವಾಲಯಗಳಲ್ಲೂ ನೀಡಲಾಗುತ್ತದೆ.
ಕಷಾಯ ತಯಾರಿ: ಆಟಿ ಅಮಾವಾಸ್ಯೆಯ ದಿನದಂದು ಬ್ರಾಹ್ಮೀ ಮುಹೂರ್ತದಲ್ಲಿ ‘ಸಪ್ತಪರ್ಣಿ’ ವೃಕ್ಷದ(ತುಳುವಿನಲ್ಲಿ ಪಾಲೆ ಮರ) ತೊಗಟೆ ತಂದು ಕಲ್ಲಿನಿಂದ ಜಜ್ಜಿ ತೆಗೆದ ರಸವನ್ನು ಸೇವಿಸುವ ಪದ್ಧತಿ ತುಳುನಾಡಿನಲ್ಲಿದೆ. ತೊಗಟೆ ತಂದ ನಂತರ ಜಜ್ಜಿ ರಸ ತೆಗೆದು, ಕಾಳು ಮೆಣಸು, ಓಂ ಕಾಳು, ಬೆಳ್ಳುಳ್ಳಿ, ಸ್ವಲ್ಪ ಜೀರಿಗೆ ಅರಿಶಿಣ ಸೇರಿಸಿ ಕಷಾಯ ಮಾಡಿ ಸೇವಿಸಲಾಗುತ್ತದೆ. ಕಹಿ ಒಗರಾದ ಈ ಕಷಾಯದೊಂದಿಗೆ ಬೆಲ್ಲವನ್ನೋ ಅಥವಾ ಸುಟ್ಟ ಗೇರು ಬೀಜವನ್ನೋ ಸೇವಿಸಲಾಗುತ್ತದೆ. ಅಲ್ಲದೇ, ಅಂದು ಮೆಂತೆ ಗಂಜಿಯನ್ನೂ ಮಾಡಲಾಗುತ್ತದೆ.
ಆರೋಗ್ಯಕ್ಕೆ ಉತ್ತಮ:
ಹಿಂದಿನ ಕಾಲದಲ್ಲಿ ಮನೆಮದ್ದಿಗೆ ಹೆಚ್ಚಿನ ಪ್ರಾಶಸ್ತ್ಯ ಇತ್ತು. ಮನೆಯ ಸುತ್ತ ಮುತ್ತಲು ಸಿಗುವ ಔಷಧೀಯ ಗುಣಗಳನ್ನು ಒಳಗೊಂಡಿರುವ ಸಸ್ಯ ಸಂಕುಲಗಳಿಂದಲೇ ಔಷಧೀಯ ಗುಣಗಳನ್ನು ಕಂಡುಕೊಂಡು ಪರಿಹಾರ ಪಡೆಯುತ್ತಿದ್ದರು. ಅದರಲ್ಲಿ ಈ ಆಟಿ ಅಮಾವಾಸ್ಯೆಯಂದು ಕುಡಿಯುವ ಕಷಾಯವೂ ಒಂದು ಎನ್ನಬಹುದು.
ಈ ಕಷಾಯವು ರೋಗ ನಿರೋಧಕ ಹಾಗೂ ನಂಜು ನಿವಾರಕ ಶಕ್ತಿಯನ್ನು ಹೊಂದಿದೆ. ಜ್ಯೇಷ್ಠ ಆಷಾಢ ಮಾಸಗಳ ಶೀತ, ಜ್ವರಗಳ ಸಮಸ್ಯೆ, ನಂಜಿನ ಬಾಧೆಗಳ ನಿವಾರಣೆಯೂ ಆಗಲಿದೆ. ಹೊಟ್ಟೆಯಲ್ಲಿನ ಲಾಡಿಹುಳ, ಜಂತುಹುಳುಗಳ ತೊಂದರೆ ನಿವಾರಣೆಯೂ ಆಗಲಿದೆ. ಹೊಟ್ಟೆ ನೋವು, ಅತಿಸಾರ, ವಾಂತಿ, ಮಲೇರಿಯಾ ಹೀಗೆ ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆಗಳಿಂದ ರಕ್ಷಣೆ ನೀಡುತ್ತದೆ.
ಹಾಗೆಯೇ, ಕೈಮಾಸ್ ಅಂದ್ರೆ ಕೈಮದ್ದು ಬಾಧೆಯೂ ಪರಿಹಾರವಾಗಲಿದೆ ಎಂದು ಹೇಳಲಾಗಿದೆ. ಆಟಿ ಅಮಾವಾಸ್ಯೆಯ ಕಷಾಯ ಸೇವಿಸಿದ್ರೆ 366 ಬಗೆಯ ಔಷಧಗಳು ಶರೀರಕ್ಕೆ ವ್ಯಾಪಿಸಿದಂತೆ ಎಂಬುದು ತುಳುವರ ನಂಬಿಕೆಯಾಗಿದೆ.