




ಕಡಬ ಟೈಮ್ : ಸುಮಾರು 6 ಕೆ.ಜಿ ಹಳೆಯ ಚಿನ್ನದ ನಾಣ್ಯಗಳು ಸಿಕ್ಕಿದ್ದು ಅರ್ಧ ಬೆಲೆಗೆ ನಾನು ನಿನಗೆ ತೆಗೆಸಿಕೊಡುತ್ತೇನೆ ಎಂಬ ಪೋನ್ ಕರೆಯೊಂದು ಹುಬ್ಬಳ್ಳಿಯಿಂಡ ಪುತ್ತೂರಿನ ಕಾರ್ ಡೀಲರೊಬ್ಬರಿಗೆ ಬಂದಿದ್ದು ಮಾತುಕತೆಯ ಆಡಿಯೋ ಸಾಮಾಜಿಕ ಜಾಲತಣದಲ್ಲಿ ಹಂಚಿಕೆ ಮಾಡಿ ಎಚ್ಚರಿಸಿದ್ದಾರೆ.
ಕುಂಬ್ರದ ಕಾರ್ ಡೀಲರ್ ಎಂ.ಎಂ ಸರ್ಫುದ್ಧೀನ್ ಎಂಬವರಿಗೆ ಈ ಕರೆ ಬಂದಿದ್ದು ಅಚ್ಚ ಕನ್ನಡದಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿ ತಾನು ನಿಮ್ಮ ಸೆಕೆಂಡ್ ಹ್ಯಾಂಡ್ ವೆಹಿಕಲ್ ಶೋರೂಮ್ನಿಂದ ಬೈಕ್ ಖರೀದಿಸಿದ ಗ್ರಾಹಕ ಎಂದೇ ಪರಿಚಯಿಸಿ ಮಾತನಾಡಿಸಿದ್ದಾನೆ .
ಮನೆಯ ಪಾಯ ತೆಗೆಸುವಾಗ ಸುಮಾರು 6 ಕೆ.ಜಿಯಷ್ಟು ಚಿನ್ನದ ನಾಣ್ಯಗಳು ಸಿಕ್ಕಿವೆ. ತಾತ ಮತ್ತು ಅಜ್ಜಿ 1 ಕೆ.ಜಿಗೆ 70 ಲಕ್ಷ ಹೇಳುತ್ತಿದ್ದಾರೆ. ಆದರೆ ನಾನು ನಿಮಗೆ 1 ಕೆ.ಜಿ ಚಿನ್ನವನ್ನು 30 ಲಕ್ಷಕ್ಕೆ ತೆಗೆಸಿಕೊಡುತ್ತೇನೆ ಎಂದು ಹೇಳಿರುವ ಆತ ನೀವು ಬಂದು ನೋಡಿಕೊಂಡು ಒಂದು ಸ್ಯಾಂಪಲ್ ತೆಗೆದುಕೊಂಡು ಹೋಗಿ ಯಾವುದೇ ಹಣ ಕೊಡುವುದು ಬೇಡ ಎಂದಿದ್ದಾನೆ. ಇದಕ್ಕೆ ಸರ್ಫುದ್ಧೀನ್ರವರು ನೀವು ಒಂದು ಸ್ಯಾಂಪಲ್ ಹಿಡಿದುಕೊಂಡು ಬನ್ನಿ ಎಂದು ಹೇಳಿದ್ದಕ್ಕೆ ಒಪ್ಪದ ಆತ ನೀವು ನಿಮ್ಮ ಗೆಳೆಯರೊಂದಿಗೆ ಕಾರಲ್ಲಿ ಬನ್ನಿ ಎಂದೇ ಹೇಳಿದ್ದಾನೆ.
ಕಾರ್ ಡೀಲರ್ ಕರೆ ಮಾಡಿದ ವ್ಯಕ್ತಿಯಲ್ಲಿ ತನ್ನ ಶೋರೂಮ್ನಿಂದ ಯಾವ ಬೈಕ್ ಖರೀದಿಸಿದ್ದು ಅದರ ಡಾಕ್ಯುಮೆಂಟ್ ಎಲ್ಲಾ ಸರಿ ಇದೆ ತಾನೆ, ಏನಾದರೂ ಸಮಸ್ಯೆ ಆಗಿದೆಯಾ ಎಂದು ಕೇಳಿದ್ದಕ್ಕೆ ಆತ ತಬ್ಬಿಬ್ಬುಗೊಂಡಿದ್ದು ಬೈಕ್ನ ಹೆಸರು ನೆನಪಿಲ್ಲ, ನಾನು ನನ್ನ ಫ್ರೆಂಡ್ಸ್ಗೆ ಖರೀದಿಸಿ ಕೊಟ್ಟಿದ್ದು ಎಂದೆಲ್ಲ ಹೇಳಿದ್ದಾನೆ. ಕರೆ ಮಾಡಿದಾತ ಗ್ರಾಹಕನಂತೆ ಪರಿಚಯಿಸಿಕೊಂಡು ಮೋಸ ಮಾಡಲು ನೋಡಿದ್ದಾನೆ..
ಆಡಿಯೋ ವೈರಲ್ ಮಾಡುವ ಮೂಲಕ ಜಾಗೃತಿ: ವಂಚಕ ಮಾಡಿದ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ ಕಾರ್ ಡೀಲರ್ ತನ್ನ ಎಲ್ಲಾ ವಾಟ್ಸಫ್ ಗ್ರೂಪ್ಗಳಿಗೆ ಶೇರ್ ಮಾಡಿದ್ದಾರೆ. ವಾಯ್ಸ್ ಲೀಕ್ ಮಾಡಬಾರದು ಎಂಬ ಬೆದರಿಕೆ ಬಂದಿದ್ದರೂ ಅದನ್ನು ಕ್ಯಾರ್ ಮಾಡದೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಇಂತಹ ಮೋಸದ ಕರೆಗಳಿಗೆ ಯಾರೂ ಬಲಿಯಾಗಬಾರದು ಎಂಬ ನಿಟ್ಟಿನಲ್ಲಿ ವಂಚಕ ಮಾಡಿರುವ ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಿ ಶೇರ್ ಮಾಡಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಗೆ ತೆರಳಿ ದೂರು ಕೂಡ ನೀಡಿದ್ದಾರೆ.
ಬೆಳ್ತಂಗಡಿಯ ವ್ಯಕ್ತಿಗಳು ಮೋಸ ಹೋಗಿ ಹೆಣವಾದ ಘಟನೆ : ನಿಧಿ ಶೋಧದ ವೇಳೆ ಚಿನ್ನಾಭರಣಗಳು ಸಿಕ್ಕಿವೆ ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಎಂಬ ಆಸೆ ತೋರಿಸಿ ಬೆಳ್ತಂಗಡಿಯ ಮೂರು ಮಂದಿಯನ್ನು ತುಮಕೂರಿಗೆ ಕರೆಸಿಕೊಂಡ ವಂಚಕರು ಅವರನ್ನು ಕೊಂದು ಕಾರು ಸಮೇತ ಸುಟ್ಟು ಹಾಕಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಇದರಲ್ಲೂ ಕೂಡ ನಿಧಿಯ ಆಸೆಗೆ ಇವರು ಹಣ ಸಮೇತ ತುಮಕೂರಿಗೆ ಬಂದಿದ್ದರು. ಆದರೆ ವಂಚಕರು ಅವರನ್ನು ಕೊಂದು ಹಣವನ್ನು ಲಪಟಾಯಿಸಿದ್ದಾರೆ. ಎಂ.ಎಂ.ಸರ್ಫುದ್ಧೀನ್ರವರಿಗೆ ಬಂದ ಕರೆಯೂ ಕೂಡ ನಮಗೆ ನಿಧಿ ಸಿಕ್ಕಿದೆ ಅದರಲ್ಲಿರುವ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ಕೊಡುತ್ತೇವೆ. ನೀವು ಕಾರು ಮಾಡಿಕೊಂಡು ಶಿವಮೊಗ್ಗಕ್ಕೆ ಬನ್ನಿ ಎಂಬುದಾಗಿತ್ತು. ಆದರೆ ಸರ್ಫುದ್ಧೀನ್ರವರು ತಮ್ಮ ಸಮಯಪ್ರಜ್ಞೆ ಹಾಗೂ ಜಾಣತನದಿಂದ ವಂಚಕನ ವಂಚನೆಯನ್ನು ಬಯಲಿಗೇಳೆಯುವಲ್ಲಿ ಸಫಲರಾಗಿದ್ದಾರೆ.