




ಕುಕ್ಕೆ ಸುಬ್ರಹ್ಮಣ್ಯ: ಸಮಾಜದಲ್ಲಿ ಪತ್ರಕರ್ತರು ಸುದ್ದಿಗಳಿಗೆ ಮಾತ್ರ ಸೀಮಿತವಾಗಿರದೆ ಸಾಮಾಜಿಕವಾಗಿಯೂ ತೊಡಗಿಕೊಂಡಿರುತ್ತಾರೆ. ಹಲವು ತಿಂಗಳುಗಳಿಂದ ಪುಟ್ ಪಾತ್ ನಲ್ಲೇ ಜೀವನ ಕಳೆಯುತ್ತಿದ್ದ ಯುವಕನನ್ನು ಭಾಷಾ ಸಂಹವನ ಕೊರತೆಯ ನಡುವೆಯೂ ಮನೆಯವರ ಜೊತೆ ಸಂಪರ್ಕಿಸುವಲ್ಲಿ ಸುಬ್ರಹ್ಮಣ್ಯದ ಹವ್ಯಾಸಿ ಪತ್ರಕರ್ತರೊಬ್ಬರು ಯಶಸ್ವಿಯಾಗಿದ್ದಾರೆ.
ವೃತ್ತಿಯಲ್ಲಿ ಅರ್ಚಕರಾಗಿರುವ ಪ್ರವೃತ್ತಿಯಲ್ಲಿ ಹವ್ಯಾಸಿ ಪತ್ರಕರ್ತರಾಗಿರುವ ಶಿವ ಭಟ್ ಅಪರಿಚಿತ ವ್ಯಕ್ತಿಯನ್ನು ಮನೆಯವರ ಜೊತೆ ಸಂಪರ್ಕ ಸಾಧಿಸಿದವರು.
ಸುಬ್ರಹ್ಮಣ್ಯದ ರಸ್ತೆಬದಿಯಲ್ಲಿ ಮಳೆಯಲ್ಲೇ ನೆನೆಯುತ್ತಾ ಮಲಗಿದ್ದ ಯುವಕನನ್ನು ವಿಚಾರಿಸಿದ ವೇಳೆ ಆತ ತಮಿಳು ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿ ತಾನು ಒಂದು ತಿಂಗಳಿನಿಂದ ಇಲ್ಲಿರುವುದಾಗಿ ತಿಳಿಸಿದ್ದರು . ಕೂಡಲೇ ಗ್ರಾ.ಪಂ ಪಿಡಿಒ ಮಹೇಶ್ ಅವರಿಗೆ ಮಾಹಿತಿ ನೀಡಿದಾಗ ಕೂಡಲೇ ರಕ್ಷಣೆಗಾಗಿ ಸಾಮಾಜಿಕ ಮುಂದಾಳು ರವಿ ಕಕ್ಕೆ ಪದವು ಮತ್ತು ಗ್ರಾ.ಪಂ ಸದಸ್ಯ ಹರೀಶ್ ಇಂಜಾಡಿ ಆಗಮಿಸಿದ್ದರು. ಬಳಿಕ ಜನ ರಹಿತ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆತನನ್ನು ಸ್ನಾನ ಮಾಡಿಸಿ ಹೊಸ ಬಟ್ಟೆ ನೀಡಿ ತಿಂಡಿ ನೀಡಿದ್ದರು.
ಆತನನ್ನು ವಿಚಾರಿಸಿದಾಗ ಕೊಯಮತ್ತೂರಿನ ಸತೀಶ್ ಎಂದು ಹೇಳಿದ್ದು ಈ ವೇಳೆ ಪತ್ರಕರ್ತ ಶಿವಭಟ್ ಅವರು ಅಲ್ಲಿನ ಪೊಲೀಸರ ಸಹಾಯವಾಣಿಯನ್ನು ಸಂಪರ್ಕಿಸಿದ್ದರು.ಜೊತೆಗೆ ಅಲ್ಲಿನ ಮಹೇಂದ್ರನ್ ಎಂಬವರು ನಡೆಸುವ (NGO)ಸಂಸ್ಥೆಯನ್ನು ಸಂಪರ್ಕಿಸಿದ್ದರು.ಆತ ಹೇಳಿದ ವಿಳಾಸವನ್ನು ತಾಳೆ ಮಾಡಿದಾಗ ಕೊಯಂಬತ್ತೂರು ಗಾಂಧಿನಗರ ಆರ್. ಎಸ್. ಪುರಂ ಎಂಬುದು ಸ್ಪಷ್ಟವಾಯಿತು.
ಸಂಸ್ಥೆಯ ಮೂಲಕ ಕುಟುಂಬಸ್ಥರು ಪತ್ರಕರ್ತರನ್ನು ಸಂಪರ್ಕಿಸಿ ಯುವಕನ ತಾಯಿ ಸರಸ್ವತಿ ಅಳುತ್ತಲೇ ಮಾತನಾಡಿದ್ದಾರೆ.ಈ ವೇಳೆ ಬೆಂಗಳೂರು ಜನಸ್ನೇಹಿ ಸೇವಾಶ್ರಮಕ್ಕೆ ಕಳುಹಿಸಿರುವ ಬಗ್ಗೆ ಸ್ಪಷ್ಟ ಪಡಿಸಿ ಅಲ್ಲಿಂದಲೇ ಕರೆದುಕೊಂಡು ಹೋಗುವಂತೆ ತಿಳಿಸಲಾಯಿತು.
ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಅಧಿಕಾರಿ ಜುಬಿನ್ ಮಹಾಪಾತ್ರ ಅವರ ಸಹಕಾರದಿಂದ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದು ಪೊಲೀಸ್ ಠಾಣೆ ಮತ್ತು ಗ್ರಾ.ಪಂ ನಿಂದ ಒಪ್ಪಿಗೆ ಪತ್ರ ಪಡೆದು ಸೇವಾ ಆಶ್ರಮಕ್ಕೆ ಕಳಿಸಲಾಯಿತು.ಜೊತೆಗೆ ರಸ್ತೆ ಬದಿಯಲ್ಲಿ ಪತ್ತೆಯಾದ ಮತ್ತೋರ್ವ ಸತೀಶ್ ಎಂಬ ವ್ಯಕ್ತಿಯನ್ನು ಇದೇ ವಾಹನದಲ್ಲಿ ಆಶ್ರಮಕ್ಕೆ ಕಳಿಸಲಾಗಿದೆ
ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಕಾರ್ತಿಕ್, ಗ್ರಾಮ ಪಂಚಾಯತ್ ಪಿಡಿಒ ಮಹೇಶ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಾಧಾಕೃಷ್ಣ,ವೀರೇಶ್, ದೇವಿ ಪ್ರಸಾದ್ ಸಹಕರಿಸಿದ್ದಾರೆ.