




ವಿವಿ ನೆಲ್ಯಾಡಿ ಘಟಕ ಕಾಲೇಜಿಗೆ ಮೀಸಲಾಗಿರುವ ಜಾಗಕ್ಕೆ ಅರಣ್ಯ ಇಲಾಖೆ ಅಡ್ಡಿ-ಆರೋಪ
ಕಡಬ ಟೈಮ್ಸ್(KADABA TIMES):ನೆಲ್ಯಾಡಿ: ತೊಟ್ಟಿಲಗುಂಡಿ ಎಂಬಲ್ಲಿ ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿಗೆ ಮೀಸಲಾಗಿರುವ ಜಾಗಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು ಮುಂದಿನ ಗ್ರಾಮ ಸಭೆಯೊಳಗೆ ಮಂಗಳೂರು ವಿವಿಗೆ ಜಾಗ ಬಿಟ್ಟುಕೊಡಬೇಕು. ಇಲ್ಲದೇ ಇದ್ದಲ್ಲಿ ಗ್ರಾಮಸಭೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ ಘಟನೆ ನೆಲ್ಯಾಡಿ ಗ್ರಾಮ ಸಭೆಯಲ್ಲಿ ನಡೆದಿದೆ.
ಸದ್ರಿ ಜಾಗದಲ್ಲಿರುವ ಮರ ತೆರವಿಗೆ ಕೆಸಿಡಿಸಿ ಆಕ್ಷೇಪಿಸುತ್ತಿದೆ ಎಂದು ಉಪವಲಯಾರಣ್ಯಾಧಿಕಾರಿಯವರು ಗ್ರಾಮಸ್ಥರ ಆರೋಪಕ್ಕೆ ಸಭೆಯಲ್ಲಿ ಸ್ಪಷ್ಟನೆ ನೀಡಿದರು. ಸಭೆ ಜು.25ರಂದು ಗ್ರಾ.ಪಂ.ಅಧ್ಯಕ್ಷೆ ಚೇತನರವರ ಅಧ್ಯಕ್ಷತೆಯಲ್ಲಿ ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಪಶುವೈದ್ಯಾಧಿಕಾರಿ ಡಾ.ಅಜಿತ್ ನೋಡೆಲ್ ಅಧಿಕಾರಿಯಾಗಿದ್ದರು.

ತೊಟ್ಟಿಲಗುಂಡಿಯಲ್ಲಿ ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿಗೆ ೨೪ ಎಕ್ರೆ ಜಾಗ ಮಂಜೂರುಗೊಂಡು ಆರ್ಟಿಸಿಯೂ ಆಗಿದೆ. ಆದರೆ ಅಲ್ಲಿ ಕಟ್ಟಡ ನಿರ್ಮಾಣ ಸಂಬಂಧ ಮರ ತೆರವುಗೊಳಿಸಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂಬ ಮಾಹಿತಿ ಇದೆ. ನೆಲ್ಯಾಡಿಯಲ್ಲಿ ಪದವಿ ಕಾಲೇಜು ಆಗಬೇಕೆಂಬುದು ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾಗಿದೆ. ಇದಕ್ಕೆ ಅರಣ್ಯ ಇಲಾಖೆ ಸಹಕಾರ ನೀಡಬೇಕೆಂದು ಗ್ರಾಮಸ್ಥರು ಹೇಳಿದರು. ಪದವಿ ಕಾಲೇಜು ಇಲ್ಲಿಂದ ಕಡಬಕ್ಕೆ ಎತ್ತಂಗಡಿ ಆಗಲಿದೆ ಎಂಬ ಮಾಹಿತಿಯೂ ಇದೆ. ಯಾವುದೇ ಕಾರಣಕ್ಕೂ ನೆಲ್ಯಾಡಿಯಿಂದ ಕಾಲೇಜು ಸ್ಥಳಾಂತರಗೊಳ್ಳಬಾರದೂ ಎಂದು ಗ್ರಾಮಸ್ಥರು ಹೇಳಿದರು.
ಗ್ರಾಮಸ್ಥರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಉಪವಲಯಾರಣ್ಯಾಧಿಕಾರಿ ಸುನಿಲ್ಕುಮಾರ್ರವರು, ಸದ್ರಿ ಜಾಗ ಅರಣ್ಯ ಇಲಾಖೆಯಿಂದ ಗೇರು ಅಭಿವೃದ್ಧಿ ನಿಗಮದವರು ಲೀಸ್ಗೆ ಪಡೆದುಕೊಂಡು ಅಲ್ಲಿ ಗೇರು ಗಿಡ ಬೆಳೆಸಿದ್ದಾರೆ. ಅರಣ್ಯ ಇಲಾಖೆಯಿಂದ ಯಾವುದೇ ಅಡ್ಡಿ ಮಾಡುತ್ತಿಲ್ಲ. ಗೇರು ಮರ ತೆರವಿಗೆ ಗೇರು ಅಭಿವೃದ್ಧಿ ನಿಗಮದವರಿಂದ ಆಕ್ಷೇಪಣೆ ಇದೆ ಎಂದರು. ಅಲ್ಲಿ ಜಾಗ ಒತ್ತುವರಿ ಆಗಿದೆ. ಇದಕ್ಕೆ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಈ ಬಗ್ಗೆ ಸಾಕಷ್ಟೂ ಚರ್ಚೆ ನಡೆದು ಮುಂದಿನ ಗ್ರಾಮಸಭೆಯೊಳಗೆ ಮಂಗಳೂರು ವಿವಿಯವರಿಗೆ ಜಾಗ ಬಿಟ್ಟುಕೊಡಬೇಕು. ಇಲ್ಲದೇ ಇದ್ದಲ್ಲಿ ಗ್ರಾಮಸಭೆ ಬಹಿಷ್ಕರಿಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಗ್ರಾಮಸ್ಥರಾದ ವರ್ಗೀಸ್ ಮಾದೇರಿ, ಜಾನ್ ಪಿ.ಎಸ್., ಗಣೇಶ್ ಪೊಸೊಳಿಕೆ, ನಝೀರ್ ಎಂ.ಎನ್., ಅಬ್ದುಲ್ಲಾ ಮೊರಂಕಳ, ವೆಂಕಟ್ರಮಣ ಆರ್., ಅಣ್ಣಿ ಎಲ್ತಿಮಾರ್ ಮತ್ತಿತರರು ವಿಷಯ ಪ್ರಸ್ತಾಪಿಸಿದರು.