




ಕಡಬ ಟೈಮ್ಸ್(KADABA TIMES): ಸುಬ್ರಹ್ಮಣ್ಯದಲ್ಲಿ ಮಳೆಯಿಂದಾಗಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಕಣ್ಮರೆಯಾಗಿದ್ದ ಸೋದರಿಯರನ್ನು ದೀರ್ಘ ಕಾರ್ಯಾಚರಣೆಯ ಬಳಿಕ ಮೇಲಕ್ಕೆತ್ತುವ ಸಂದರ್ಭ ಇಬ್ಬರೂ ಒಬ್ಬರಿಗೊಬ್ಬರು ಕೈ ಕೈ ಹಿಡಿದುಕೊಂಡ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.
ಪರ್ವತಮುಖಿಯ ಕುಸುಮಾಧರ ಅವರ ಮಕ್ಕಳಾದ ಶ್ರುತಿ (11) ಮತ್ತು ಜ್ಞಾನಶ್ರೀ (6) ಮಣ್ಣಿನಡಿ ಸಿಲುಕಿ ಮೃತಪಟ್ಟವರು.

ಸೋಮವಾರ ಸಂಜೆಯಿಂದಲೇ ಭಾರೀ ಮಳೆ ಸುರಿಯುತ್ತಿದ್ದು, ಸಂಜೆ 7 ಗಂಟೆ ಸುಮಾರಿಗೆ ಒಮ್ಮೆಲೇ ಭಾರೀ ಜೋರಾದ ಶಬ್ದ ಕೇಳಿಸಿತ್ತು. ಈ ವೇಳೆ ಮನೆಯ ಜಗಲಿಯಲ್ಲಿ ಓದುತ್ತಿದ್ದ ಶ್ರುತಿ ಪುಸ್ತಕವನ್ನು ಅಲ್ಲಿಯೇ ಬಿಟ್ಟು ಶಬ್ದ ಮನೆಯ ಒಳಗಿಂದ ಬಂದಿರಬಹುದು ಎಂದು ಅತ್ತ ಓಡಿದಳು. ಜ್ಞಾನಶ್ರೀ ಮನೆಯ ಒಳಗೆ ಚಾವಡಿಯಲ್ಲಿದ್ದು ದೊಡ್ಡವಳು ಕೂಡ ಅಲ್ಲಿಗೆ ತಲುಪಿದ್ದರು. ಇದೇ ಸಂದರ್ಭ ಗುಡ್ಡ ಮನೆಯ ಮೇಲೆಯೇ ಕುಸಿಸಿದೆ. ಅಡುಗೆಯಲ್ಲಿ ನಿರತರಾಗಿದ್ದ ತಾಯಿ ಅದೇ ಕ್ಷಣ ಶಬ್ದಕ್ಕೆ ಹೆದರಿ ಮಕ್ಕಳು ಹೊರಗಿದ್ದಾರೆ ಎಂದು ಹೊರಗಡೆ ಬಂದಿದ್ದಾರೆ.
ತಡರಾತ್ರಿ ಸುರಿಯುತ್ತಿದ್ದ ಮಳೆಯೂ ರಕ್ಷಣ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಮಣ್ಣಿನಡಿ ಸಿಲುಕಿದ ಸೋದರಿಯರನ್ನು ದೀರ್ಘ ಕಾರ್ಯಾಚರಣೆಯ ಬಳಿಕ ಮೇಲ ಕ್ಕೆತ್ತುವ ಸಂದರ್ಭ ಇಬ್ಬರೂ ಒಬ್ಬರಿಗೊಬ್ಬರು ಕೈ ಕೈ ಹಿಡಿದುಕೊಂಡ ಸ್ಥಿತಿಯಲ್ಲಿರುವುದನ್ನು ಕಂಡು ಎಲ್ಲರ ಕಣ್ಣಂಚಿನಲ್ಲಿ ನೀರು ತುಂಬಿತ್ತು.