




ಕಡಬ ಟೈಮ್ಸ್(KADABA TIMES):ಕ್ಷುಲ್ಲಕ ಕಾರಣಕ್ಕೆ ಹೊಡದಾಟ ನಡೆದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಸ್ಲಿಂ ಯುವಕ ಇಂದು ಮಧ್ಯಾಹ್ನ ಸಾವನ್ನೊಪ್ಪಿದ್ದಾನೆ. .
ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರಿನ ಮಸೂದ್ ಬಿ. (18) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಯುವಕ.
ಪ್ರಕರಣದ ವಿವರ : ಮಸೂದ್ ತಿಂಗಳ ಹಿಂದೆ ಸುಳ್ಯದ ಬೆಳ್ಳಾರೆ ಸಮೀಪದ ಕಳಂಜಕ್ಕೆ ಬಂದು ಸ್ಥಳೀಯವಾಗಿ ಕೂಲಿ ಕೆಲಸ ಮಾಡುತ್ತಿದ್ದ. ಕಳೆದ ಜುಲೈ 19ರ ಸಂಜೆ ಸುಧೀರ ಎಂಬಾತನಿಗೆ ಮಸೂದ್ ಅಂಗಡಿ ಬಳಿ ಕೈ ತಾಗಿದ ವಿಚಾರದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಮಸೂದ್ ಸುಧೀರನಿಗೆ ಬಾಟಲಿ ತೋರಿಸಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಇದೇ ವೇಳೆ ಅಲ್ಲೇ ಇದ್ದ ಅಭಿಲಾಷ್, ಸುನಿಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಈ ವಿಚಾರವನ್ನು ಪೆಲತ್ತಡ್ಕದ ಇಬ್ರಾಹಿಂ ಶಾನೀಫ್ ಎಂಬವರಿಗೆ ತಿಳಿಸಿ, ವಿಚಾರವನ್ನು ಮಾತನಾಡಿ ಇತ್ಯರ್ಥಗೊಳಿಸುವ, ಮಸೂದ್ನನ್ನು ಜತೆಗೆ ಕರೆ ತನ್ನಿ ಎಂದಿದ್ದರು. ಅದರಂತೆ ಅವರು ಸೂಚಿಸಿದ ಸ್ಥಳಕ್ಕೆ ಮಸೂದ್ನನ್ನು ರಾತ್ರಿ 11 ಗಂಟೆಗೆ ಕರೆದುಕೊಂಡು ಬಂದಿದ್ದ ವೇಳೆ ಹಲ್ಲೆ ಮಾಡಿದ್ದಾರೆ. ಅಭಿಲಾಷ್ ಎಂಬಾತ ಸ್ಥಳದಲ್ಲಿದ್ದ ಖಾಲಿ ಜ್ಯೂಸ್ ಬಾಟಲಿಯಿಂದ ಮಸೂದನ ತಲೆಗೆ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ.
ಈ ವೇಳೆ ಮಸೂದ್ ಅಲ್ಲಿಂದ ಓಡಿ ಹೋಗಿದ್ದು, ಬಳಿಕ ಹುಡುಕಾಟ ನಡೆಸಿದ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ. ಗಾಯಗೊಂಡಿದ್ದ ಆತನನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿ ಅನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದೀಗ ಆತ ಸಾವನ್ನಪ್ಪಿದ್ದು, ಹಲ್ಲೆಯ ಆರೋಪದಲ್ಲಿ ಬಂಧನವಾಗಿದ್ದ ಎಂಟು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಪೋಲಿಸರು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.