




ಕಡಬ ಟೈಮ್ಸ್(KADABA TIMES):ಸುಳ್ಯ ಸರ್ಕಲ್ ವ್ಯಾಪ್ತಿಯ ಬೆಳ್ಳಾರೆ ಹಾಗೂ ಸುಬ್ರಹ್ಮಣ್ಯ ಪೊಲೀಸ್ ಠಾಣೆಗಳಿಗೆ ನೂತನವಾಗಿ ಪೊಲೀಸ್ ಉಪನಿರೀಕ್ಷಕರನ್ನು ನೇಮಕ ಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶಿಸಿದ್ದಾರೆ.
ಕುಂದಾಪುರ ಎಸೈ ಆಗಿದ್ದ ಸುಹಾಸ್ ಅವರು ಬೆಳ್ಳಾರೆ ಠಾಣೆಗೆ,ವಿಟ್ಲ ಠಾಣಾ ಎಸೈ ಆಗಿದ್ದ ಮಂಜುನಾಥ ಟಿ ಅವರನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಈ ಹಿಂದೆ ಬೆಳ್ಳಾರೆಯಲ್ಲಿ ಎಸೈ ಆಗಿದ್ದ ರುಕ್ಮ ನಾಯ್ಕ್ , ಸುಬ್ರಹ್ಮಣ್ಯ ಎಸೈ ಆಗಿದ್ದ ಜಂಬೂರಾಜ್ ಮಹಾಜನ್ ಅವರನ್ನು ಐಜಿಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಹತ್ಯೆಯಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಅವರ ಅಂತಿಮ ಯಾತ್ರೆಯ ವೇಳೆ ನಡೆದ ಲಾಠಿ ಚಾರ್ಜ್ ಸಂದರ್ಭ ಅಲ್ಲಿ ಉಪಸ್ಥಿತರಿದ್ದ ಕೆಲ ಹಿಂದೂ ಕಾರ್ಯಕರ್ತರಿಗೆ ವಿನಾ ಕಾರಣ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಕೇರಳ ರಾಜ್ಯದ ಕಾಸರಗೋಡಿನ ಹಿರಿಯ ಅರ್ ಎಸ್ ಎಸ್ ಸ್ವಯಂ ಸೇವಕ ರಮೇಶ್ ಎಂಬವರು ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ತಪ್ಪಿಸಲು ಹೋದಾಗ ಆವರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು . ಈ ಲಾಠಿ ಚಾರ್ಜ್ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು .
ಈ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಠಾಣೆ ಪಿಎಸೈ ಹಾಗೂ ಬೆಳ್ಳಾರೆ ಹೆಡ್ ಕಾನ್ಸ್ಟೇಬಲ್ ವಿರುದ್ದ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದರು . ಇವರಿಬ್ಬರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಜನಪ್ರತಿನಿಧಿಗಳನ್ನು ಕಾರ್ಯಕರ್ತರು ಒತ್ತಾಯಿಸಿದ್ದರು . ಇದಾದ ಎರಡೇ ದಿನದಲ್ಲಿ ಇವರಿಬ್ಬರನ್ನು ವರ್ಗಾವಣೆಗೊಳಿಸಲಾಗಿದೆ