




ಕಡಬ ಟೈಮ್ಸ್(KADABA TIMES):ಕಡಬ/ರಾಮಕುಂಜ: ವರದಕ್ಷಿಣೆ ರಹಿತ ವಿವಾಹ ಮಾಡಿಕೊಳ್ಳುವುದಾಗಿ ಪ್ರಚಾರಗಿಟ್ಟಿಸಿ ಬಳಿಕ ವರದಕ್ಷಿಣೆ ಪಡೆದು ಮದುವೆಯಾಗಿರುವ ವ್ಯಕ್ತಿಯೊಬ್ಬ ಇದೀಗ ಮತ್ತಷ್ಟು ವರದಕ್ಷಿಣೆ ತರುವಂತೆ ಮಾನಸಿಕ ಕಿರುಕುಳ ನೀಡಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಆತನ ಪತ್ನಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ರಾಮಕುಂಜ ಆತೂರು ಪೆರ್ಜಿ ನಿವಾಸಿ ಪಿ.ಹುಸೈನ್ ಮತ್ತು ಮೈಮುನಾ ದಂಪತಿಗಳ ಪುತ್ರಿ ಸೆಮೀಮಾ (28) ರವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾದವರು.

2021ರ ಜೂ.15ಕ್ಕೆ ಹಾಸನದ ಚಿಕ್ಕನನಾಡು ಟಿ.ಎಚ್.ಇಬ್ರಾನ್ ಅವರೊಂದಿಗೆ ನಡೆದಿತ್ತು.ವಧು ನೋಡಲು ಬಂದ ವೇಳೆ, ವರದಕ್ಷಿಣೆ ರಹಿತ ವಿವಾಹವಾಗುವುದಾಗಿ ನಂಬಿಸಿ ವಿವಾಹವಾಗಿ ಬಳಿಕ ವರದಕ್ಷಿಣೆ ಪಡೆದಿದ್ದರು. ಆ ಬಳಿಕ ಪದೇ ಪದೇ ನನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಈ ಕುರಿತು ನನ್ನ ತವರು ಮನೆಗೆ ತಿಳಿಸಿದ್ದಾಗ ರಾಜಿ ಮಾತುಕತೆ ನಡೆಸಲಾಗಿತ್ತಾದರೂ ಮತ್ತೆ ಮತ್ತೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತಮಗೆ 2 ಹೆಣ್ಣು ಮತ್ತು ಒಂದು ಗಂಡು ಮಗುವಿದೆ. ಇದೀಗ ಗಂಡ ಸಹಿತ ಆತನ ಮನೆ ಮಂದಿ ಸೇರಿಕೊಂಡು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಜುಲೈ 21 ರಂದು ಹಾಸನ ಮನೆಯಿಂದ ನನ್ನನ್ನು ಆತೂರು ಮನೆಗೆ ಕಳುಹಿಸಿದ್ದಾರೆ. ಅದೇ ದಿನ ರಾತ್ರಿ ನನ್ನ ಗಂಡ ಆತೂರು ಮನೆಗೆ ಬಂದು ನನಗೆ ಹಲ್ಲೆ ನಡೆಸಿದ್ದಾರೆ ಎಂದು ಸೇಮಿಮಾ ಆರೋಪಿಸಿದ್ದು, ಘಟನೆ ಕುರಿತು ಕಡಬ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಸೇಮಿಮಾ ಅವರು ತಿಳಿಸಿದ್ದಾರೆ.