




ಕಡಬ ಟೈಮ್ಸ್(KADABA TIMES):ಕಡಬ/ಐತ್ತೂರು: ದ.ಕ ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಕಟ್ಟೆಯಿಂದ ಓಟಗಜ್ಜೆಗೆ ಹೋಗುವ ರಸ್ತೆಯನ್ನು ಅಗೆದು ಹಾಕಲಾಗಿದ್ದು ರಸ್ತೆ ಸಂಪೂರ್ಣ ಕೆಸರುಮಯವಾಗಿದೆ.
ಸ್ಥಳೀಯರು ಹಾಗೂ ಶಾಲಾ ಮಕ್ಕಳು ಪಕ್ಕದ ರೈಲ್ವೆ ಹಳಿಗಳ ಮೇಲೆ ಮತ್ತು ರಬ್ಬರ್ ಪ್ಲಾಂಟೇಷನ್ಗೆ ಅಳವಡಿಸಿರುವ ವಿದ್ಯುತ್ ತಡೆಬೇಲಿ ಮಧ್ಯದಲ್ಲಿ ನುಸುಳಿಕೊಂಡು ಅಪಾಯಕಾರಿ ರೀತಿಯಲ್ಲಿ ಮನೆಗೆ ಹೋಗುವ ಸನ್ನಿವೇಶ ಎದುರಾಗಿದೆ.
ಈ ಸಮಸ್ಯೆಗಳ ಬಗ್ಗೆ ಕಡಬ ತಹಶೀಲ್ದಾರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಪ್ರಸ್ತುತ ರಸ್ತೆ ಹದಗೆಟ್ಟಿರುವ ಹಿನ್ನೆಲೆ ಸಂಚರಿಸುವ ರಸ್ತೆಯಲ್ಲಿ ಸುಮಾರು 2 ಕಿ. ಮೀ ರೈಲ್ವೆ ಟ್ರ್ಯಾಕ್ ಮತ್ತು ಅಪಾಯಕಾರಿ ರೈಲ್ವೆ ಬ್ರಿಡ್ಜ್ ಇದ್ದು, ಪುಟ್ಟ ಮಕ್ಕಳ ಸಹಿತ ಸ್ಥಳೀಯರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ.

ಇನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ಪ್ಲಾಂಟೇಷನ್ ಜಾಗವಿದ್ದು ಸುರಕ್ಷತೆ ದೃಷ್ಟಿಯಿಂದ ಸೋಲಾರ್ ವಿದ್ಯುತ್ ತಂತಿ ಬೇಲಿ ಅಳವಡಿಸಲಾಗಿದೆ. ಇದರ ನಡುವೆಯೂ ಮಕ್ಕಳು ನುಸುಳಿಕೊಂಡು ಹೋಗುತ್ತಿದ್ದಾರೆ. ಮಕ್ಕಳು ಸಂಚರಿಸುವ ವೇಳೆ ಇದನ್ನು ಆಫ್ ಮಾಡಲಾಗುತ್ತಿದೆ ಎನ್ನಲಾಗುತ್ತಿದ್ದರೂ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಸ್ಥಳೀಯರು.
ಕೂಡಲೇ ಈ ರಸ್ತೆಯನ್ನು ಸರಿಪಡಿಸಿ ಜನರು ಭಯರಹಿತರಾಗಿ ಓಡಾಡಲು ಅವಕಾಶ ಮಾಡಿ ಕೊಡಬೇಕೆಂದು, ನೀತಿ ಸಾಮಾಜಿಕ ಸಂಘಟನೆ ರಾಜ್ಯಾಧ್ಯಕ್ಷ ಜಯಂತ್ ಅವರು ಆಗ್ರಹಿಸಿದ್ದಾರೆ.