




ಕಡಬ ಟೈಮ್ಸ್(KADABA TIMES):ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಗಮನಿಸದೆ ಸವಾರರೊಬ್ಬರು ಬೈಕ್ ಓಡಿಸಿದ ಪರಿಣಾಮ ಬೈಕ್ ಮರದ ತುಂಡಿಗೆ ಢಿಕ್ಕಿ ಹೊಡೆದು ರಸ್ತೆಗೆ ಉರುಳಿ ಬಿದ್ದು ಬೈಕ್ ಚಲಾಯಿಸುತ್ತಿದ್ದ ಹೊಟೇಲ್ ಮಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜೂ.15 ರಂದು ಬೆಳ್ಳಂಬೆಳಿಗ್ಗೆ ಧರ್ಮಸ್ಥಳದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಮುಗುಳಿಚತ್ರ ನಿವಾಸಿ ನೇಮಿರಾಜ್ ಬುಣ್ಣು ಅವರ ಮಗ ವಸಂತ್ ಕುಮಾರ್ ಜೈನ್ (42) ಅಪಘಾತದಲ್ಲಿ ಮೃತಪಟ್ಟವರು.
ಶ್ರೀಕ್ಷೇತ್ರ ಧರ್ಮಸ್ಥಳ ಕೆಲಸ ಮಾಡುತ್ತಿದ್ದ ಇವರು ಕೆಲ ಸಮಯದ ಹಿಂದೆಯಷ್ಟೇ ಕನ್ಯಾಡಿ ಬಳಿ ಹೊಟೇಲ್ ಆರಂಭಿಸಿದ್ದರು.

ಈ ಗಾಳಿ ಮಳೆಗೆ ನಿನ್ನೆ ರಾತ್ರಿ ಧರ್ಮಸ್ಥಳದ ನೇತ್ರಾವತಿ ನದಿಯ ಬಳಿಯ ಅಡ್ಯಾಲ ಚಡವು ಎಂಬಲ್ಲಿ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಆದರೇ ನಸುಕಿನ ಜಾವ 5.30ರ ಸುಮಾರಿಗೆ ತನ್ನ ಹೊಟೇಲಿಗೆ ಬೈಕಿನಲ್ಲಿ ಅತುರಾತುರವಾಗಿ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ಗಮನಿಸಿಲ್ಲ.
. ಹೀಗಾಗಿ ಮರವನ್ನು ಗಮನಿಸದೇ ಬೈಕ್ ಚಲಾಯಿಸಿದ ಪರಿಣಾಮ ಮರಕ್ಕೆ ಢಿಕ್ಕಿ ಹೊಡೆದ ಬೈಕ್ ಚಿಮ್ಮಿ ತುಸು ದೂರ ಹೋಗಿ ಬಿದ್ದಿದೆ ಎನ್ನಲಾಗಿದೆ . ಅಪಘಾತದ ತೀವ್ರತೆಗೆ ಉರುಳಿದ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಬೈಕ್ ಒಂದು ಅಪಾಘಾತಗೊಂಡು ರಸ್ತೆಯಲ್ಲಿ ಬಿದ್ದಿರುವುದನ್ನು ಗಮನಿಸಿದ ಆ ವೇಳೆ ಆ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರೊಬ್ಬರು ಪೊಲೀಸ್ ತುರ್ತು ಸಂಖ್ಯೆ 112 ಗೆ ಕರೆ ಮಾಡಿ ತಿಳಿಸಿದ್ದಾರೆ.ತಕ್ಷಣ ಸ್ಥಳಕ್ಕೆ ಬಂದು ಬೆಳ್ತಂಗಡಿ ಸಂಚಾರಿ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿ ನಂತರ ಪೊಲೀಸರು ಮಹಜರು ನಡೆಸಿ ಆಂಬುಲೆನ್ಸ್ ತರಿಸಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.