




ಕಡಬ ಟೈಮ್ಸ್ (KADABA TIMES):ಯಾವುದೇ ಸಂದರ್ಭದಲ್ಲಾಗಲಿ ಕೋವಿಡ್ 19 ಸೋಂಕಿನ ವಿರುದ್ಧ ಹೋರಾಡುತ್ತಿರುವ ಕೋವಿಡ್ ಆಶಾಕಾರ್ಯಕರ್ತೆಯರಾಗಲಿ, ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಐದು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸುವ “ಸಾಂಕ್ರಾಮಿಕ ರೋಗಗಳ ತಿದ್ದುಪಡಿ” ಮಸೂದೆಗೆ ರಾಜ್ಯಸಭೆ ಶನಿವಾರ (ಸೆಪ್ಟೆಂಬರ್ 19, 2020) ಅಂಗೀಕರಿಸಿದೆ.
ಏಪ್ರಿಲ್ ತಿಂಗಳಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದ “ಸಾಂಕ್ರಾಮಿಕ ರೋಗಗಳ ತಿದ್ದುಪಡಿ” ಮಸೂದೆ 2020 ಅನ್ನು ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಶನಿವಾರ ಮೇಲ್ಮನೆಯಲ್ಲಿ ಮಂಡಿಸಿದರು.ಕೇಂದ್ರ ಸಚಿವ ಸಂಪುಟ ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಅನ್ನು ತಿದ್ದುಪಡಿ ಮಾಡಿ ಸಾಂಕ್ರಾಮಿಕ ರೋಗಗಳ ತಿದ್ದುಪಡಿ ಮಸೂದೆಯನ್ನಾಗಿ ಮಾಡಿತ್ತು. ಈ ತಿದ್ದುಪಡಿ ಆರೋಗ್ಯ ಸೇವೆ ನೀಡುವ ಸಿಬ್ಬಂದಿಗಳ ಮತ್ತು ಆಸ್ತಿಯನ್ನು ರಕ್ಷಿಸಲಿದೆ ಎಂದು ವರದಿ ತಿಳಿಸಿದೆ.

ಏನಿದು ಮಸೂದೆ:ಒಂದು ವೇಳೆ ಕೋವಿಡ್ ವಾರಿಯರ್ಸ್ ಅಥವಾ ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ಬಗ್ಗೆ ದೂರು ನೀಡಿದಾಗ ಈ ಆರೋಪದ ಬಗ್ಗೆ ಇನ್ಸ್ ಪೆಕ್ಟರ್ ಶ್ರೇಣಿಯ ಅಧಿಕಾರಿ 30 ದಿನದೊಳಗೆ ತನಿಖೆ ನಡೆಸಬೇಕು. ಅಲ್ಲದೇ ಹೇಳಿಕೆಯನ್ನು ಲಿಖಿತವಾಗಿ ದಾಖಲಿಸುವ ಕಾರಣಗಳಿಂದಾಗಿ ಅನಾವಶ್ಯಕವಾಗಿ ಕೋರ್ಟ್ ವಿಚಾರಣೆಯಲ್ಲಿ ವಿಳಂಬವಾಗದಂತೆ ಒಂದು ವರ್ಷದಲ್ಲಿಯೇ ವಿಚಾರಣೆ ಪೂರ್ಣಗೊಳಿಸುವಂತೆ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ತನಿಖೆಯಲ್ಲಿ, ಕೋರ್ಟ್ ನಲ್ಲಿ ಆರೋಪ ಸಾಬೀತಾದರೆ ಮೂರು ತಿಂಗಳಿನಿಂದ ಐದು ವರ್ಷದವರೆಗೆ ಜೈಲುಶಿಕ್ಷೆ ವಿಧಿಸಬಹುದಾಗಿದೆ. ಅಲ್ಲದೇ 50 ಸಾವಿರ ದಿಂದ 2 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.