




ಕಡಬ ಟೈಮ್ಸ್ (KADABA TIMES):ತಾಲೂಕು ಕೇಂದ್ರವಾಗಿ ಮಾರ್ಪಟ್ಟಿರುವ ಕಡಬದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿದರೂ ಸರಿಯಾದ ವ್ಯವಸ್ಥೆ ಇಲ್ಲದೆ ಕಡಬ ಭಾಗದ ಜನತೆ ದೂರದ ಪುತ್ತೂರು, ಮಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ.
ಇದೀಗ ಕೇಂದ್ರ ಸರಕಾರದ ಆಯುಷ್ಮಾನ್ ಕಾರ್ಡ್ನ ಮೂಲಕ ಉಚಿತ ಚಿಕಿತ್ಸೆ ಸೌಲಭ್ಯವನ್ನು ದ.ಕ.ಜಿಲ್ಲೆಯ ಸುಮಾರು 40 ಆಸ್ಪತ್ರೆಗಳಿಗೆ ನೀಡಿದ್ದರೂ ಕಡಬ ತಾಲೂಕಿನ ಯಾವುದೇ ಆಸ್ಪತ್ರೆಗಳಿಗೆ ನೀಡದಿರುವುದು ಅಚ್ಚರಿಯ ಸಂಗತಿ.ಈಗಾಗಿ ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಾರಣವೆಂದು ಜನ ಸಾಮಾನ್ಯರು ಈಗ ದ್ವನಿ ಎತ್ತಿದ್ದಾರೆ.
ಕೇಂದ್ರ ಸರಕಾರದ ಆರೋಗ್ಯ ಇಲಾಖೆಯಿಂದ ಬಿಪಿಎಲ್ ಪಡಿತರದಾರರಿಗೆ ವಾರ್ಷಿಕ ಐದು ಲಕ್ಷ ರೂಪಾಯಿಯವರೆಗಿನ ಉಚಿತ ಚಿಕಿತ್ಸೆ, ಹಾಗೂ ಎಪಿಎಲ್ ಪಡಿತರದಾರಿಗೆ ಶೇ.30ರಷ್ಟು ಉಚಿತ ಚಿಕಿತ್ಸೆಗಳ ಸೌಲಭ್ಯ ಇದೆ. ಆದರೆ ಈ ಸೌಲಭ್ಯ ಪಡೆಯಲು ಜನರು ಪುತ್ತೂರು, ಮಂಗಳೂರಿಗೆ ಹೋಗಬೇಕಾಗಿದೆ.
ಸುಮಾರು 5 ಕೋಟಿಗೂ ಮಿಕ್ಕಿದ ಅನುದಾನದಲ್ಲಿ ಸುಸಜ್ಜಿತ ಕಟ್ಟಡವಿದ್ದರೂ ಇಲ್ಲಿ ತಜ್ಞ ವೈದ್ಯರು, ಸಿಬ್ಬಂದಿಗಳ ಕೊರತೆ, ವೈದ್ಯಕೀಯ ಸಲಕರಣೆಗಳ ಕೊರತೆಯಿಂದ ಚಿಕಿತ್ಸೆಗಳೇ ಇಲ್ಲದಂತಾಗಿದೆ, ಕೇವಲ ತಲೆನೋವು, ಜ್ವರ, ಮತ್ತು ಅಪಘಾತ ನಡೆದಾಗ ಪ್ರಥಮ ಚಿಕಿತ್ಸೆ ಮೊದಲಾದ ಸೀಮಿತ ಚಿಕಿತ್ಸೆಗಳಿಗೆ ಮೀಸಲಿದ್ದಂತಿದೆ. ಸುಬ್ರಹ್ಮಣ್ಯದಲ್ಲಿ ದಿನಂಪ್ರತಿ ಸಾವಿರಾರು ಯಾತ್ರಿಕರು ಬರುತ್ತಿದ್ದರೂ ಅಲ್ಲಿಯೂ ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಕಡಬದಲ್ಲೇ ಹೊಸದಾಗಿ ಪ್ರಾರಂಭಗೊಂಡಿರುವ ಖಾಸಗಿ ಕ್ಲೀನಿಕ್ ಒಂದರಲ್ಲಿ ದುಬಾರಿ ಹಣ ನೀಡಿ ಚಿಕಿತ್ಸೆ ಪಡೆಯಬೇಕಾಗಿದೆ.

ಬೇರೆ ಎಲ್ಲ ವಿಚಾರಗಳಿಗೆ ಇಲ್ಲಿನ ರಾಜಕೀಯ ನಾಯಕರು, ಸಂಘಟನೆಗಳು, ಹೋರಾಟ ಮಾಡುತ್ತಿದ್ದರೂ ಕಡಬದಲ್ಲಿ ಎಲ್ಲ ಜನರಿಗೆ ಅನುಕೂಲವಾಗುವ ಆರೋಗ್ಯ ಕೇಂದ್ರದ ವಿಚರದಲ್ಲಿ ಹೋರಾಟಗಳೇ ನಡೆಯುವುದು ಅತೀ ಕಡಿಮೆ, ಕಡಬ ಸಮುದಾಯ ಆಸ್ಪತ್ರೆಗೆ ತಜ್ಞ ವೈದ್ಯರುಗಳು, ವೈದ್ಯಕೀಯ ಸಲಕರಣೆಗಳನ್ನು ನೀಡಿ ಸೌಲಭ್ಯಗಳನ್ನು ನೀಡುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ.
ತಜ್ಞ ವೈದ್ಯರಿಲ್ಲದ ಕಾರಣ ಆಯುಷ್ಮಾನ್ ಯೋಜನೆ ನೀಡಲಾಗಿಲ್ಲ-ಡಿ.ಎಚ್.ಒ
ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯಾರಿ ಅವರು ಪ್ರತಿಕ್ರಿಯೆ ನೀಡಿ, ಆಯುಷ್ಮಾನ್ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ಸೌಲಭ್ಯವನ್ನು ಆಸ್ಪತ್ರೆಗೆ ನೀಡಬೇಕಾದರೆ ಆಸ್ಪತ್ರೆಯಲ್ಲಿ ತಜ್ಞ ವೈದ್ಯರುಗಳು ಬೇಕಾಗುತ್ತದೆ, ಕಡಬ ಸಮುದಾಯ ಆಸ್ಪತ್ರೆಯಲ್ಲಿ ತಜ್ಞ ವೈದ್ಯರುಗಳು ಇಲ್ಲದೆ ಇರುವುದರಿಂದ ಅಲ್ಲಿಗೆ ನೀಡಲಾಗಿಲ್ಲ, ತಜ್ಞ ವೈದ್ಯರ ನೇಮಕವಾದ ಬಳಿಕವೇ ಆಯುಷ್ಮಾನ್ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.