




ಕಡಬ ಟೈಮ್ಸ್, ಪ್ರಮುಖ ಸುದ್ದಿ: ಪುತ್ತೂರು ಪಟ್ಟಣದ ಬೀರಮಲೆ ಬೆಟ್ಟದಲ್ಲಿ ಅಪ್ರಾಪ್ತ ಬಾಲಕನೊಬ್ಬನಿಗೆ ಅವಮಾನ ಹಾಗೂ ಧರ್ಮದ ಹೆಸರಲ್ಲಿ ನಿಂದನೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೂರುದಾರರ ಪ್ರಕಾರ, ಜುಲೈ 5 ರಂದು ಮಧ್ಯಾಹ್ನ ಬಾಲಕನು ತನ್ನ ಪರಿಚಯದ ಬಾಲಕಿಯೊಂದಿಗೆ ಬೀರಮಲೆ ಬೆಟ್ಟದ ಬಳಿ ಕುಳಿತಿದ್ದ ವೇಳೆ ಇಬ್ಬರು ಅಪರಿಚಿತರು ಅಕ್ರಮವಾಗಿ ಅವರನ್ನು ತಡೆದು ನಿಲ್ಲಿಸಿದರು. ಬಳಿಕ ಅವಾಚ್ಯ ಶಬ್ದಗಳಿಂದ ಬೈದು, "ನಿಮ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತೇವೆ" ಎಂದು ಬೆದರಿಕೆ ಹಾಕಿದರು. ಜೊತೆಗೆ, ಬಾಲಕನ ಧರ್ಮದ ಕುರಿತು ನಿಂದನೆ ಮಾಡಿ, ಸ್ಥಳೀಯರನ್ನು ಕರೆದು ಅವಮಾನಗೊಳಿಸಿದ ವಿಡಿಯೋವನ್ನೂ ಚಿತ್ರೀಕರಿಸಿದರು.
ವಿಡಿಯೋವನ್ನು ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಮ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ಅದರಲ್ಲಿ ಬಾಲಕನನ್ನು ಅನ್ಯಧರ್ಮದವನೆಂದು ತೋರಿಸಿದ್ದಾರೆ. ಈ ಮೂಲಕ ಕೋಮು ಸಾಮರಸ್ಯವನ್ನು ಹದಗೆಡಿಸಲು ಹಾಗೂ ಧರ್ಮಗಳ ನಡುವೆ ದ್ವೇಷ ಸೃಷ್ಟಿಸಲು ಯತ್ನಿಸಲಾಗಿದೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ.: 54/2025ರಡಿಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳು 126(2), 352, 351(2), 353(1)(C), 57, 196(1)(a) ಹಾಗೂ BNS 2023ರ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತ ಕಡಬ ಸಮೀಪದ ಕುದ್ಮಾರು, ನಿವಾಸಿ ಪುರುಷೋತ್ತಮ (43) ಹಾಗೂ ಪುತ್ತೂರು ಆರ್ಯಾಪುವಿನ ರಾಮಚಂದ್ರ (38) ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ
ಇದೀಗ ಪ್ರಕರಣಕ್ಕೆ ಸಂಬಂಧಿಸಿದ ಯುವಕರು ಇಬ್ಬರೂ ಅಪ್ರಾಪ್ತರಾಗಿರುವ ಕಾರಣ, ಪ್ರಕರಣದ ವಿವರಗಳನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವಾಗ ಬಾಲ ನ್ಯಾಯ ಕಾಯ್ದೆ ಮತ್ತು ನಿಯಮಾವಳಿಗಳಂತೆ ವರದಿ ಮಾಡುವಂತೆ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ.