




ಕಡಬ ಟೈಮ್ಸ್, (KADABA TIMES): ಯಾವುದೇ ಪೂರ್ವಾನುಮತಿ ಪಡೆಯದೇ, ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕಡಬ ಠಾಣೆಯ ಮುಂಭಾಗದಲ್ಲಿ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಹಿಂದೂ ಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ವರಿಷ್ಠಾಧಿಕಾರಿಯವರ ಸೂಚನೆಯಂತೆ ಕಡಬ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಸಂಘಟನೆಯ ಪ್ರಮುಖರ ಮನೆಗಳಿಗೆ ತೆರಳಿ ಜಿಪಿಎಸ್ ಆಧಾರಿತ ಫೋಟೊ ತೆಗೆಯಲು ಮುಂದಾಗಿದ್ದರು. ಮೇ 30, ಮೇ 31 ಹಾಗೂ ಜೂನ್ 1ರಂದು ರಾತ್ರಿ ವೇಳೆ ಸಂಘಟನೆಗಳ ಪ್ರಮುಖರ ಮನೆಗಳಿಗೆ ತೆರಳಿ ಜಿ.ಪಿ.ಎಸ್. ಫೋಟೋ ತೆಗೆದು ವಿಚಾರಣೆ ನಡೆಸುತ್ತಿದ್ದರು.
ಇದನ್ನು ವಿರೋಧಿಸಿ ನಮ್ಮನ್ನು ಹುಡುಕಿಕೊಂಡು ನೀವು ಮನೆಗೆ ಬರುವುದು ಬೇಡ, ನಾವೇ ಠಾಣೆಗೆ ಬಂದಿದ್ದೇವೆ, ಎಷ್ಟು ಬೇಕಾದರೂ ಫೋಟೋ ತೆಗೆದುಕೊಳ್ಳಿ, ಯಾವ ರೀತಿಯ ತನಿಖೆ ಬೇಕಾದರೂ ಮಾಡಿ ಎಂದು ಹೇಳಿ ಸ್ಥಳದಲ್ಲಿದ್ದವರು ಠಾಣೆಯ ಎದುರಲ್ಲಿ ಕುಳಿತುಕೊಂಡಿದ್ದರು .
ಈ ಘಟನೆಗೆ ಸಂಬಂಧಿಸಿ ಪ್ರಮೋದ್
ರೈ ನಂದುಗುರಿ, ತಿಲಕ್ ನಂದುಗುರಿ, ಮೋಹನ್ ಕೆರೆಕೋಡಿ, ಚಂದ್ರಶೇಖರ ನೂಜಿಬಾಳ್ತಿಲ, ಮಹೇಶ್ ಕುಟ್ರುಪ್ಪಾಡಿ, ಡೀಕಯ್ಯ ನೂಜಿಬಾಳ್ತಿಲ, ಸುಜಿತ್ ಕುಟ್ರುಪ್ಪಾಡಿ, ಶರತ್ ನಂದುಗುರಿ, ಶ್ರೇಯತ್ ನಂದುಗುರಿ, ಉಮೇಶ್ ನೂಜಿಬಾಳ್ತಿಲ, ರಾಧಾಕೃಷ್ಣ, ಕೆ., ಜಯಂತ್ ಮತ್ತು ಇತರ ಮೂವರ ವಿರುದ್ದ ಕೇಸು ದಾಖಲಾಗಿದೆ .
ಅದರಂತೆ ಒಟ್ಟು ಹದಿನೈದು ಮಂದಿಯ ವಿರುದ್ದ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ: 39/2025 ಕಲಂ:
189(2),190 BNS-2023 ರಂತೆ
ಪ್ರಕರಣ ದಾಖಲಾಗಿದೆ.
ದ.ಕ. ಜಿಲ್ಲೆಗೆ ನೂತನ ಎಸ್.ಪಿ. ಮತ್ತು ಕಮಿಷನರ್ ಆಗಮಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಾಮಾಜಿಕ ಜಾಲತಾಣ ಮತ್ತು ಸಂಘಟನೆಗಳ ಪ್ರಮುಖರ ಮೇಲೆ ನಿಗಾ ವಹಿಸಲಾಗಿದೆ . ಮೇಲಾಧಿಕಾರಿಗಳ ಸೂಚನೆಗೆ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ.