




KADABA TIMES (ಕಡಬ ಟೈಮ್ಸ್ ): ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಳೆ ಸೇತುವೆಯ ಕೆಳಭಾಗದಲ್ಲಿ ವ್ಯಕ್ತಿಯೊಬ್ಬರ ಬೈಕ್, ಮೊಬೈಲ್, ಶರ್ಟ್ ಹಾಗೂ ಚಪ್ಪಲಿಗಳು ಅನಾಥವಾಗಿ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ಸೊತ್ತುಗಳು ಪುತ್ತೂರಿನ ನಗರಸಭಾ ಸದಸ್ಯರೊಬ್ಬರದು ಎಂದು ಹೇಳಲಾಗುತ್ತಿದೆ .ಅವರು ಈ ವಸ್ತುಗಳನ್ನು ಅಲ್ಲಿಟ್ಟು ಕಾಣೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳೀಯರ ಹೇಳಿಕೆ ಪ್ರಕಾರ, ಇಂದು ಬೆಳಿಗ್ಗೆ ಸುಮಾರು 11 ಗಂಟೆಯಿಂದ ಈ ಬೈಕ್ ಹಾಗೂ ಇತರ ವಸ್ತುಗಳು ಸೇತುವೆಯ ಕೆಳಗೆ ಅನಾಥವಾಗಿ ಬಿದ್ದಿರುವುದನ್ನು ಗಮನಿಸಿ, ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ದೊರೆತ ಮೊಬೈಲ್ನಿಂದ ಸಂಖ್ಯೆಯನ್ನು ಪಡೆದು ಪೊಲೀಸರು ಕರೆ ಮಾಡಿದಾಗ, ಅದು ಪುತ್ತೂರಿನ ರಮೇಶ್ ರೈ ಅವರಿಗೆ ಸೇರಿದ್ದೆಂದು ಗೊತ್ತಾಗಿದೆ.
ತಕ್ಷಣವೇ ಅವರ ಕುಟುಂಬ ಸದಸ್ಯರಿಗೆ ವಿಷಯವನ್ನು ತಿಳಿಸಲಾಗಿದೆ. ಸುದ್ದಿ ತಿಳಿದು ರಮೇಶ್ ರೈ ಅವರ ಕುಟುಂಬ ಸದಸ್ಯರು, ಬಂಟ್ವಾಳ ಪೊಲೀಸರು ಹಾಗೂ ನೂರಾರು ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದಾರೆ.
ಸೇತುವೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ನದಿ ತೀರದಲ್ಲಿ ವ್ಯಕ್ತಿಗಾಗಿ ತೀವ್ರ ಶೋಧ ಕಾರ್ಯವನ್ನು ಆರಂಭಿಸಲಾಗಿದೆ. ಪಕ್ಕದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಟ್ಯಾಂಕಿ ಇದ್ದು , ಇದಕ್ಕೆ ಹಾರಿರಬಹುದೆಂಬ ಶಂಕೆಯನ್ನು ಹಲವರು ವ್ಯಕ್ತಪಡಿಸಿದ್ದಾರೆ.