






ಕಡಬ ಟೈಮ್ಸ್, ಪ್ರಮುಖ ಸುದ್ದಿ: ರಾಜ್ಯದೆಲ್ಲೆಡೆ ಇಂದು ಸಡಗರ ಮತ್ತು ಸಂಭ್ರಮದಿಂದ ನಾಡಪ್ರಭು ಕೆಂಪೇಗೌಡ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜೂ.27 ರಂದು ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಕಡಬ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಅವರ 516ನೇ ಜಯಂತೋತ್ಸವ ಆಚರಿಸಲಾಯಿತು. ತಹಸೀಲ್ದಾರ್ ಪ್ರಭಾಕರ ಖಜೂರೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ,ಕೆಂಪೇ ಗೌಡರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಭೆಯ ಅಧ್ಯಕ್ಷತೆವಹಿಸಿದ್ದರು.
ಪ್ರಮುಖ ಭಾಷಣ ಮಾಡಿದ ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಚೇತನ್ ಆನೆಗುಂಡಿ ಮಾತನಾಡಿ ಕರುನಾಡಿನ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಬೆಂಗಳೂರಿನ ನಿರ್ಮಾತೃ ನಾಡ ಪ್ರಭು ಕೆಂಪೇ ಗೌಡ ಅವರು ಅತ್ಯುತ್ತಮ ಆಡಳಿತಗಾರ,ಮೇರು ವ್ಯಕ್ತಿತ್ವದ ಅವರನ್ನು ಪೂಜಿಸಲ್ಪಡುವ ಸ್ಥಾನ ಮಾನಕ್ಕೆ ಅರ್ಹರು. ಮುಂದಿನ ಪೀಳಿಗೆಗೆ ಇವರ ಸಂಪೂರ್ಣ ವಿವರ ನೀಡುವ ನಿಟ್ಟಿನಲ್ಲಿ ಕೆಂಪೇ ಗೌಡರ ವಿಚಾರವನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸುವ ಕಾರ್ಯವಾಗಬೇಕು.
ರಾಜನೀತಿ ಹಾಗೂ ದೂದೃಷ್ಠಿಯಿಂದಾಗಿ ಬೆಂಗಳೂರು ಎಂಬ ಸುಂದರ ನಗರ ನಿರ್ಮಿಸಿ ಇಡೀ ದೇಶಕ್ಕೆ ಶ್ರೇಷ್ಠವಾದ ಇತಿಹಾಸ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇಂತಹ ಆದರ್ಶ ಇತಿಹಾಸ ನಮ್ಮ ಸ್ಮೃತಿಪಟಲದಲ್ಲಿ ಯಾವತ್ತೂ ಉಳಿಯುವಂತಾಗಬೇಕಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದಾದರೂ ಹಂತದಲ್ಲಿ ಮಕ್ಕಳ ಪಠ್ಯ ಪುಸ್ತಕದಲ್ಲಿ ಅದು ಸೇರ್ಪಡೆಯಾಗಬೇಕು ಎಂದು ಚೇತನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಕಡಬ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ ಸಮಯೋಚಿತವಾಗಿ ಮಾತನಾಡಿದರು.
ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜ್, ಸರಕಾರಿ ಪ್ರೌಢ ಶಾಲಾ ಪ್ರಿನ್ಸಿಪಾಲ್ ಡಾ|ವೇದಾವತಿ, ತಾ.ಪಂ ಸಹಾಯಕ ನಿರ್ದೆಶಕ ಸಂದೇಶ್ , ಮೆಸ್ಕಾಂ ಸಹಾಯಕ ಇಂಜಿನಿಯರ್ ಸತ್ಯನಾರಾಯಣ ಸಿ.ಕೆ. ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಡಬ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತಗೀತೆ ಹಾಡಿದರು. ಉಪತಹಸೀಲ್ದಾರ್ ಗೋಪಾಲ್ ಸ್ವಾಗತಿಸಿ. ತಾಲೂಕು ಕಛೇರಿ ಸಿಬ್ಬಂದಿ ಉದಯ ಕುಮಾರ್ ವಂದಿಸಿದರು. ಶಿಕ್ಷಕ ಗಣೇಶ್ ನಡುವಾಲ್ ಕಾರ್ಯಕ್ರಮ ನಿರೂಪಿಸಿದರು.