




ಕಡಬ ಟೈಮ್ಸ್ (KADABA TIMES): ಕುಕ್ಕೆ ಸುಬ್ರಹ್ಮಣ್ಯ: ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಯಾತ್ರಿಕನೊಬ್ಬನ ಮೇಲೆ ಖಾಸಗಿ ವಸತಿ ಗೃಹದ ಏಜೆಂಟರ ಗುಂಪೊಂದು ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಜೂ7 ನಡಿದ್ದು ಈ ದೌರ್ಜನ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ .ಅಲ್ಲದೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕುಕ್ಕೆ ಕ್ಷೇತ್ರಕ್ಕೆ ಬಂದಿದ್ದ ಯುವಕನೊಬ್ಬ ಆದಿ ಸುಬ್ರಹ್ಮಣ್ಯ
ಪ್ರದೇಶದಲ್ಲಿ ವಸತಿಗಾಗಿ ಕೊಠಡಿಯೊಂದನ್ನು ವೀಕ್ಷಿಸಿದ್ದಾನೆ. ಆದರೆ, ಕಾರಣಾಂತರಗಳಿಂದ ಆ ಕೊಠಡಿಯನ್ನು
ಬಾಡಿಗೆಗೆ ಪಡೆಯಲು ನಿರಾಕರಿಸಿ ಹೊರನಡೆದಿದ್ದಾನೆ. ಇದೇ ಕಾರಣಕ್ಕೆ ಕೆರಳಿದ ಕೊಠಡಿ ನಿರ್ವಾಹಕರ ತಂಡ, ಯುವಕನನ್ನು
ಅಡ್ಡಗಟ್ಟಿ ವಾಗ್ವಾದಕ್ಕಿಳಿದಿದೆ . “ಕೊಠಡಿ ನೋಡಿ
ಸುಮ್ಮನೆ ಹೋಗುತ್ತೀಯಾ?” ಎಂದು ದರ್ಪದಿಂದ ಪ್ರಶ್ನಿಸಿದ ಗುಂಪು, ಮಾತಿಗೆ ಮಾತು ಬೆಳೆದು ಯುವಕನ ಮೇಲೆ
ಏಕಾಏಕಿ ಹಲ್ಲೆ ನಡೆಸಿದೆ. ಗುಂಪಿನಲ್ಲಿದ್ದ ಓರ್ವ
ವ್ಯಕ್ತಿ ಯುವಕನ ಕೆನ್ನೆಗೆ ಬಾರಿಸುವ ದೃಶ್ಯಗಳು ವೀಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ತೆರೆಮರೆಯಲ್ಲಿ
ವಾಣಿಜ್ಯ ಮಾಫಿಯಾ ನಡೆಯುತ್ತಿದೆಯಾ?: ಈ ಘಟನೆ ಕೇವಲ ಒಂದು ಆಕಸ್ಮಿಕ ಜಗಳವಲ್ಲ, ಬದಲಿಗೆ ಸುಬ್ರಹ್ಮಣ್ಯದಲ್ಲಿ ಬೇರೂರುತ್ತಿರುವ ಅಕ್ರಮ ದಂಧೆಯ
ಕರಾಳ ಮುಖವನ್ನು ಅನಾವರಣಗೊಳಿಸಿದೆ ಎಂದು ಸ್ಥಳೀಯರು
ಆತಂಕ ವ್ಯಕ್ತಪಡಿಸಿದ್ದಾರೆ. ಹೊರಗಿನಿಂದ ಬಂದ ಕೆಲವರು ಇಲ್ಲಿನ ಕೊಠಡಿಗಳನ್ನು ಗುತ್ತಿಗೆಗೆ ಪಡೆದು,
ಹಣದಾಸೆಗಾಗಿ ಯಾತ್ರಿಕರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ
ಎಸಗುತ್ತಿದ್ದಾರೆ. ತಮ್ಮ ವ್ಯವಹಾರಕ್ಕೆ ಅಡ್ಡಿಯಾದರೆ ಅಥವಾ ನಿರೀಕ್ಷಿತ ಲಾಭ ಬರದಿದ್ದರೆ, ಈ ರೀತಿ
ಗೂಂಡಾಗಿರಿಗೆ ಇಳಿಯುತ್ತಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಇಂತಹ ಮಾಫಿಯಾಗಳು ಕ್ಷೇತ್ರದ ಹೆಸರಿಗೆ ಮಸಿ ಬಳಿಯುತ್ತಿವೆ.
ಸಾರ್ವಜನಿಕರ
ಆಕ್ರೋಶ ಮತ್ತು ಆಗ್ರಹ: ಶಾಂತಿ, ನೆಮ್ಮದಿ ಮತ್ತು ಭಕ್ತಿಗಾಗಿ ದೇಶದ ನಾನಾ ಭಾಗಗಳಿಂದ ಬರುವ ಯಾತ್ರಿಕರಿಗೆ
ರಕ್ಷಣೆ ಇಲ್ಲವಾಗಿದೆ. ಹಣದಾಸೆಗೆ ಅಮಾಯಕರ ಮೇಲೆ ಹಲ್ಲೆ ನಡೆಸುವುದು ಯಾವ ನ್ಯಾಯ
ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ನೂತನ
ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು
ತಕ್ಷಣವೇ ಮಧ್ಯಪ್ರವೇಶಿಸಿ, ಹಲ್ಲೆ ನಡೆಸಿದ ಗೂಂಡಾಗಳನ್ನು
ಬಂಧಿಸಬೇಕು. ಈ ಘಟನೆಯ ಹಿಂದೆ ಇರುವ ಅಕ್ರಮ ಕೊಠಡಿ ದಂಧೆಕೋರರ ಜಾಲವನ್ನು ಪತ್ತೆಹಚ್ಚಿ ಅವರ ವಿರುದ್ಧ
ಕಠಿಣ ಕಾನೂನು ಕ್ರಮ ಜರುಗಿಸಬೇಕು. ಸುಬ್ರಹ್ಮಣ್ಯದ
ಪಾವಿತ್ರ್ಯತೆಯನ್ನು ಉಳಿಸಿ, ಯಾತ್ರಿಕರಿಗೆ ಸುರಕ್ಷಿತ ಮತ್ತು ನಿರ್ಭೀತ ವಾತಾವರಣವನ್ನು ಕಲ್ಪಿಸಿಕೊಡಬೇಕೆಂದು
ಭಕ್ತಾದಿಗಳು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.