




ಕಡಬ ಟೈಮ್ಸ್, ಪ್ರಮುಖ ಸುದ್ದಿ: ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರವು ಆಡಳಿತಾತ್ಮಕ ಬದಲಾವಣೆ ಮಾಡಿದ್ದು, ಮಂಗಳವಾರ (ಜೂ.17) ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಇದರಲ್ಲಿ ಐವರು ಜಿಲ್ಲಾಧಿಕಾರಿಗಳು ಸೇರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೆ ಮುಗಿಲನ್ ಅವರನ್ನು ವರ್ಗಾವಣೆ ಮಾಡಿದ್ದು, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯಕ್ತರಾಗಿದ್ದ ದರ್ಶನ್ ಎಚ್.ವಿ ಅವರನ್ನು ದ.ಕನ್ನಡ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಮು ಮುಗಿಲನ್ ಅವರನ್ನು ನೋಂದಣಿ ಮತ್ತು ಮುದ್ರಾಂಕದ ಐಜಿ ಯಾಗಿ ನೇಮಿಸಲಾಗಿದೆ
ಉಡುಪಿ ಜಿಲ್ಲಾಧಿಕಾರಿಯಾಗಿದ್ದ ವಿದ್ಯಾಕುಮಾರಿ ಅವರನ್ನು ವರ್ಗಾವಣೆ ಮಾಡಿದ್ದು, ಇದುವರೆಗೆ ಇ-ಆಡಳಿತ ನಿರ್ದೇಶಕರಾಗಿದ್ದ ಸ್ವರೂಪ ಟಿ.ಕೆ ಅವರನ್ನು ಉಡುಪಿ ಡಿಸಿ ಆಗಿ ನೇಮಿಸಲಾಗಿದೆ.
ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಅವರನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಕಾರ್ಯದರ್ಶಿಯಾಗಿ ವರ್ಗಾಯಿಸಿದ್ದು, ಪ್ರಭಾರ ಹುದ್ದೆಯಲ್ಲಿದ್ದ ಡಾ.ಆರ್. ವಿಶಾಲ್ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಹಾಸನ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರನ್ನು ಸಮಗ್ರ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕಿಯಾಗಿ ವರ್ಗಾಯಿಸಿದ್ದು, ಡಾ.ಕೆ.ವಿ. ತ್ರಿಲೋಕ್ಚಂದ್ರ ಅವರನ್ನು ಹೆಚ್ಚುವರಿ ಹೊಣೆಗಾರಿಕೆಯಿಂದ ಬಿಡುಗಡೆ ಮಾಡಿದೆ. ಜತೆಗೆ ಬೆಂಗಳೂರು ನಗರ ಜಿಪಂ ಸಿಇಒ ಕೆ.ಎಸ್. ಲತಾಕುಮಾರಿ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಿದೆ.