




ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯಿಂದ ಸಂಚರಿಸುವಂತೆ ವಿನಂತಿ
![]() |
ಹೆದ್ದಾರಿ ಬದಿ ಗುಡ್ಡ ಕುಸಿದಿರುವ ದೃಶ್ಯ(KADABA TIMES) |
ಕಡಬ/ನೆಲ್ಯಾಡಿ : ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೭೫ ರ ಪೆರಿಯಶಾಂತಿ ಸಮೀಪ ಮಣ್ಣಗುಂಡಿ ಎಂಬಲ್ಲಿ ಹೆದ್ದಾರಿ ಬದಿಯ ಗುಡ್ಡ ಜರಿಯತೊಡಗಿದ್ದು, ಅಲ್ಲಿ ಸಾಗುವ ವಾಹನಗಳಿಗೆ ತೀವ್ರ ಅಪಾಯದ ಸಾಧ್ಯತೆ ಎದುರಾಗಿದೆ.
ಪ್ರಸ್ತುತ ಈ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ರಸ್ತೆ ವಿಸ್ತರಣೆ, ಚರಂಡಿ ನಿರ್ಮಾಣ ಹಾಗೂ ಇತರೆ ಕಾಮಗಾರಿಗಳು ನಡೆಯುತ್ತಿದ್ದು, ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಂಚರಿಸುತ್ತವೆ . ಎಲ್ಲಾ ಸಮಯದಲ್ಲೂ ದಿ ಲಘು ವಾಹನಗಳಿಂದ ಹಿಡಿದು ಭಾರೀ ಗಾತ್ರದ ಲಾರಿಗಳು, ಬಸ್ಗಳು ಸೇರಿದಂತೆ ಅನೇಕ ವಾಹನಗಳು ಈ ರಸ್ತೆಯಲ್ಲಿ ನಿರಂತರವಾಗಿ ಸಂಚರಿಸುತ್ತಿವೆ.
ಮಣ್ಣಗುಂಡಿ ಬಳಿ ರಸ್ತೆ ಬದಿಯಲ್ಲಿ ಗುಡ್ಡ ಜರಿಯಲಾರಂಭಿಸಿರುವುದರಿಂದ ವಾಹನ ಚಾಲಕರು ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಗುಡ್ಡದ ಭಾಗದಲ್ಲಿ ಮಣ್ಣು ಸಡಿಲಗೊಂಡು ಕೆಳಕ್ಕೆ ಜರಿಯುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಈ ಪರಿಸ್ಥಿತಿ ಮುಂದುವರಿದಲ್ಲಿ ಯಾವುದೇ ಕ್ಷಣದಲ್ಲಿ ಅವಘಡ ಸಂಭವಿಸಬಹುದಾಗಿದೆ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಈ ಕುರಿತು ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸತೀಶ್ ಪಳಿಕೆ ಅವರು ಪ್ರತಿಕ್ರಿಯಿಸಿ , “ಶೀರೂರಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅವಘಡದಂತೆಯೇ ಇಲ್ಲಿ ಸಹ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಸಂಬಂಧಿತ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತುರ್ತು ನಿರ್ವಹಣಾ ಕ್ರಮ ಕೈಗೊಳ್ಳಬೇಕು. ಅವಘಡ ಸಂಭವಿಸುವ ಮುನ್ನವೇ ತಡೆಗೋಡೆ ನಿರ್ಮಿಸಿ, ವಾಹನಗಳ ಸುರಕ್ಷತೆಗೆ ಪೂರಕವಾದ ವ್ಯವಸ್ಥೆ ಕಲ್ಪಿಸಬೇಕು,” ಎಂದು ಆಗ್ರಹಿಸಿದ್ದಾರೆ.
ಸ್ಥಳೀಯರು ಹಾಗೂ ವಾಹನ ಸವಾರರು ಹೆಚ್ಚಿನ ಎಚ್ಚರತೆಯಿಂದ ಈ ಮಾರ್ಗದಲ್ಲಿ ಸಂಚರಿಸುವಂತೆ ವಿನಂತಿಸಲಾಗಿದೆ. ಹೀಗಾಗಿ ಸಂಬಂಧಿತ ಇಲಾಖೆ ತಕ್ಷಣ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಆಗ್ರಹ ವ್ಯಕ್ತಪಡಿಸಿದ್ದಾರೆ.