


ಕಡಬ ಟೈಮ್, ಆಲಂಕಾರು : ನಕಲಿ ಫೋನ್ ಪೇ ಬಳಸಿ ವರ್ತಕರಿಗೆ ವಂಚಿಸುತ್ತಿದ್ದ ಯುವಕನೋರ್ವನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ಆಲಂಕಾರಿನಲ್ಲಿ ಶನಿವಾರ ನಡೆದಿದೆ.
ಅಂಗಡಿಗಳಿಗೆ
ತೆರಳಿ ಮನೆಗೆ ಬೇಕಾಗುವ ಸಾಮಗ್ರಿ, ಹಣ್ಣು ಹಂಪಲು ಖರೀದಿಸುತ್ತಿದ್ದ ಈತ ಆ ಬಳಿಕ ನನಗೆ ಇಂತಿಷ್ಟು ಹಣ ಬೇಕು. ಸಾಮಾಗ್ರಿ ಮೊತ್ತವನ್ನು ಒಟ್ಟು ಸೇರಿಸಿ ಫೊನ್ ಪೇ ಮಾಡುತ್ತೇನೆ ಎಂದು ಹೇಳಿ ನಕಲಿ ಫೋನ್ ಪೇ ಮೂಲಕ ಹಣ ಪಾವತಿಸಿ
ತಾನು ಬೇಡಿಕೆ ಇಟ್ಟಿರುವ ಮೊತ್ತವನ್ನು ಪಡೆದು ಜಾಗ ಖಾಲಿ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ.
ಘಟನೆಗೆ
ಸಂಬಂಧಿಸಿ ಸವಣೂರಿನ ಸಮೀರ್ ಎಂಬಾತನನ್ನು
ಆಲಂಕಾರಿನ ವರ್ತಕರು ಹಿಡಿದಿದ್ದರು. ಆಲಂಕಾರು
ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಹಲವು ವರ್ತಕರಿಗೆ ಈತ ಈ ರೀತಿ ಮೋಸ ಮಾಡಿದ್ದ. ಶನಿವಾರ ಮಧ್ಯಾಹ್ನ
ವೇಳೆ ಅಂಗಡಿಯೊಂದರಲ್ಲಿ ಹಣದ ಬೇಡಿಕೆ ಇಟ್ಟ ವೇಳೆ ಆತನ ಸ್ವರ ಹಾಗೂ ಕೈಯಲ್ಲಿರುವ ಬ್ಯಾಂಡೇಜ್ ಮೂಲಕ
ಅಂಗಡಿಯ ಕೆಲಸದ ಯುವಕ ಗುರುತು ಹಿಡಿದು ತನ್ನ ಮಾಲಕನಿಗೆ ಮಾಹಿತಿ ನೀಡಿದ. ಸ್ಥಳದಲ್ಲಿದ್ದ ಜನ ಜಮಾಯಿಸಿ ವಿಚಾರಿಸಿದಾಗ ವಂಚಿಸಿರುವುದನ್ನು ಒಪ್ಪಿಕೊಂಡ
ಹಿನ್ನೆಲೆಯಲ್ಲಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ .
ತನ್ನ ಸ್ಕೂಟರ್ಗೆ ನಕಲಿ ನಂಬರ್ಪ್ಲೇಟ್ ಅಳವಡಿಸಿರುವುದು ಪೊಲೀಸ್
ತನಿಖೆಯ ವೇಳೆ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ . ಪೊಲೀಸರ ಮಾಹಿತಿ ಪ್ರಕಾರ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಸಮರ್ಪಕವಾಗಿ ಉತ್ತರಿಸಿಲ್ಲ ಎನ್ನಲಾಗಿದ್ದು, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ . ಆತನ ಕುಟುಂಬದವರು ಆತನಿಗೆ ನೀಡಿದ ಚಿಕಿತ್ಸಾ ವಿವರ, ಕೆಲ ದಾಖಲೆಗಳನ್ನು ತೋರಿಸಿದ್ದಾರೆ. ಅಲ್ಲದೆ
ಆತ ಬಳಸುತ್ತಿದ್ದ ಮೊಬೈಲ್ ಪೋನನ್ನು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ. ಕಡಬ ಠಾಣೆಯಲ್ಲಿ
ಯಾವುದೇ ಪ್ರಕರಣ ದಾಖಲಾಗಿಲ್ಲ.