



ಕಡಬ ಟೈಮ್ಸ್, ಕುಕ್ಕೆ ಸುಬ್ರಮಣ್ಯ: ಅಧಿಕಾರಿಗಳ ಗಮನಕ್ಕೆ ತಾರದೆ ಕುಕ್ಕೆ ದೇಗುಲದ ಆಡಳಿತ ಕಚೇರಿಯ ಕಂಪ್ಯೂಟರ್ ನ ಪಾಸ್ವರ್ಡ್ ಪಡದು ದುರ್ಬಳಕೆ ಮಾಡಿದ ಆರೋಪದ ಮೇರೆಗೆ ಹೊರಗುತ್ತಿಗೆ ಇಂಜಿನಿಯರ್ ಒಬ್ಬರನ್ನು ಕೆಲಸದಿಂದ ವಜಾ ಗೊಳಿಸಿದ ಘಟನೆ ಸುಬ್ರಹ್ಮಣ್ಯದಿಂದ ವರದಿಯಾಗಿದೆ.
ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಕಚೇರಿಯಲ್ಲಿ ಇರದ ಸಂದರ್ಭದಲ್ಲಿ ಕಂಪ್ಯೂಟರ್ ನ ಗುಪ್ತ ಸಂಖ್ಯೆಗಳನ್ನು ಪಡೆದು ಟೆಂಡರ್ ಪ್ರಕ್ರಿಯೆಗಳಿಗೆ ಸಂಬಂಧಿಸಿದ ವಿಚಾರದಲ್ಲಿ ವಿಶ್ವಾಸ ದ್ರೋಹ ಎಸಗಿದ ಆರೋಪದ ಮೇರೆಗೆ ಕಂಪ್ಯೂಟರ್ ಇಂಜಿನಿಯರ್ ಭರತ್ ಎಂಬವರು ಕೆಲಸದಿಂದ ವಜಾಗೊಂಡವರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತ್ತಗುಂಡಿ ಯವರು ಸ್ವಿಸ್ ಶಾರ್ಪ್ ವಾಚ್ ಇನ್ವೆಸ್ಟಿಗೇಶನ್ ಸೆಕ್ಯುರಿಟಿ ಸರ್ವೀಸ್ ಖಾಸಗಿ ಗುತ್ತಿಗೆ ಸಂಸ್ಥೆಗೆ ದೂರು ನೀಡಿದ ಮೇರೆಗೆ ಸಂಸ್ಥೆಯು ಈ ಕ್ರಮಕ್ಕೆ ಮುಂದಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಹರೀಶ್ ಇಂಜಾಡಿಯವರು ಪ್ರತಿಕ್ರಿಯಿಸಿ, ಕಾರ್ಯನಿರ್ವಹಣಾಧಿಕಾರಿ ದಿಟ್ಟ ಕ್ರಮ ಕೈಗೊಂಡಿರುವುದು ಪ್ರಶಂಸನಾರ್ಹ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಖಾಯಂ ಸಿಬ್ಬಂದಿಗಳು ಮಾತ್ರ ಕರ್ತವ್ಯ ನಿರ್ವಹಿಸಬೇಕಾದ ಕೆಲವೊಂದು ಪ್ರಮುಖ ಆಡಳಿತಾತ್ಮಕ ವಿಭಾಗಗಳಲ್ಲಿ ಹಲವಾರು ಹೊರ ಗುತ್ತಿಗೆ ಸಿಬ್ಬಂದಿಗಳು ನಿಯಮಬಾಹಿರವಾಗಿ ಕರ್ತವ್ಯನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ. ಇಂತಹ ಸಮಸ್ಯೆಯನ್ನು ಅಧಿಕಾರಿಗಳು ಸರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.