ಕಡಬ: ಕಳ್ಳತನ ಮಾಡಿದ ಹಣದಲ್ಲೇ ಸಾಲ ತೀರಿಸಿದ ,ಈಗ ಜೈಲು ಸೇರಿದ

Kadaba Times News

ಕಡಬ ಟೈಮ್, ಪ್ರಮುಖ ಸುದ್ದಿ:  ಮರ್ದಾಳ ಸಮೀಪದ ಮನೆಯೊಂದರಿಂದ ಹಾಡಹಗಲೇ  ಬಾಗಿಲು ಮುರಿದು ಒಳನುಗ್ಗಿ  ನಗದು ಮತ್ತು ಚಿನ್ನಾಭರಣ ದೋಚಿರುವ ಕಳ್ಳತನ ಪ್ರಕರಣವನ್ನು ಕಡಬ ಪೊಲೀಸರು ಐದೇ ದಿನದಲ್ಲಿ ಪತ್ತೆ ಹಚ್ಚಿದ್ದು  ಕಳ್ಳತನ ಮಾಡಿದಾತ ಈಗ  ಜೈಲುಪಾಲಾಗಿದ್ದಾನೆ.


ಠಾಣಾ ವ್ಯಾಪ್ತಿಯ 102 ನೆಕ್ಕಿಲಾಡಿ ಗ್ರಾಮದ ಬಜಕೆರೆ ಎಂಬಲ್ಲಿ ರವಿವಾರ  ಅಟೋ ಚಾಲಕ ಕುರಿಯಕೋಸ್ ಯಾನೆ ಜೇಮ್ಸ್  ಅವರು ಪತ್ನಿ ಹಾಗೂ ಮಗನೊಂದಿಗೆ ಮನೆಗೆ ಬೀಗ ಹಾಕಿ ರವಿವಾರ ಚರ್ಚ್ ಪ್ರಾರ್ಥನೆಗಾಗಿ ತೆರಳಿದ್ದ ವೇಳೆ  ಕಳ್ಳತನ ನಡೆದಿತ್ತು. ಇದೀಗ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ .



ಕಳ್ಳತನ ಆಗಿರುವ  ಮನೆಯಿಂದ ಕೂಗಳತೆ ದೂರದಲ್ಲಿರುವ ಮನೆಯ ಯುವಕನೇ ಈ ಕಳ್ಳತನದ ರೂವಾರಿ ಎಂಬುದು ಅಚ್ಚರಿಯ ಸಂಗತಿ.   ಕಳ್ಳತನ ಪ್ರಕರಣದ ಬೆನ್ನತ್ತಿದ ಪೊಲೀಸರು ಹಲವು ಮಹತ್ವದ ಸುಳಿವುಗಳ ಆಧಾರದಲ್ಲಿ   ಕೆರ್ಮಾಯಿ ಚರ್ಚ್ ಬಳಿಯ ಸಿನು ಕುರಿಯನ್ ಎಂಬಾತನನ್ನು ಬುಧವಾರ ರಾತ್ರಿಯೇ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.   ವಿಚಾರಣೆ ವೇಳೆ   ಬೈಕ್ ನಲ್ಲಿ ಬಂದು  ಕೊಟ್ಟಿಗೆಯಿಂದ ಪಿಕ್ಕಾಸು ತಂದು ಬಾಗಿಲು ಮುರಿದು ಕಳ್ಳತನ ಮಾಡಿದ್ದಾನೆ, ಅಲ್ಲದೆ    ಸಾಲದ ಸುಳಿಯಲ್ಲಿ ಸಿಲುಕಿದ ಕಾರಣ ಕಳ್ಳತನ ಮಾಡಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.  ಈತ ಕಡಬದ  ಟೆಕ್ಸ್ ಟೈಲ್ ವೊಂದರಲ್ಲಿ  ಕೆಲಸಮಾಡುತ್ತಿದ್ದ ಎಂದು ವಿಚಾರಣೆ ವೇಳೆ  ತಿಳಿದುಬಂದಿದೆ.


ಸದ್ಯ  ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಕಳ್ಳತನ ಮಾಡಿರುವ  ಹಣದಲ್ಲಿ ಸಾಲವನ್ನು ತೀರಿಸಿ ಉಳಿದ ಹಣವನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದು ಬಂದಿದೆ.

ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕರು,  ಕಡಬ ಠಾಣಾ ಎಸ್.ಐ ಅಭಿನಂದನ್, ತನಿಖಾ ಎಸ್.ಐ ಅಕ್ಷಯ್ ಡವಗಿ, ಕಾನ್ಸ್ಟೇಬಲ್ ಗಳಾದ  ಸಿದ್ದಪ್ಪ,ಹರ್ಷಿತ್ ಪಾಲ್ಗೊಂಡಿದ್ದರು. 

ಆತ್ಮಹತ್ಯೆಗೆ ಯತ್ನಿಸಲು ಮುಂದಾಗಿದ್ದಾನೆಯೇ?: ಕಳ್ಳತನ ಮಾಡಿದ ಬಳಿಕ ಪೊಲೀಸರಿಗೆ ಸಿಕ್ಕಿಬೀಳುವ ಹಿನ್ನೆಲೆ  ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಸ್ಥಳೀಯರ ಪ್ರಕಾರ ಆತ ರಾತ್ರಿ ವೇಳೆ ರೈಲು ಹಳಿಯತ್ತ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ  ಈ ವಿಚಾರವನ್ನು  ಪೊಲೀಸರು ಇದನ್ನು ಖಚಿತಪಡಿಸಿಲ್ಲ. ಒಂದು ವೇಳೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಈ ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಆತನೇ ಕದ್ದಿರುವ ವಿಚಾರ ತಿಳಿದ ಬಳಿಕ ಕುಟುಂಬಸ್ಥರು ಮನವೊಲಿಸಿದ ಕಾರಣ ಜೀವ ಉಳಿಯುವಂತಾಗಿದೆ .

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top