


ಕಡಬ ಟೈಮ್ಸ್, ಪ್ರಮುಖ ಸುದ್ದಿ: ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಐತ್ತೂರು ಗ್ರಾಮದಲ್ಲಿ ಅಯ್ಯಪ್ಪ ಮಾಲೆಧಾರಿಗಳಿಗೆ ಮತ್ತು ವಾಹನ ಚಾಲಕರಿಗೆ ಕಾಡಾನೆ ಎದುರುಗೊಂಡ ಘಟನೆ ಜ.3 ರಂದು ಮುಂಜಾನೆ ವರದಿಯಾಗಿದೆ.
![]() |
ಕಾಡಾನೆ ಸಂಚರಿಸುತ್ತಿರುವುದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ದೃಶ್ಯ |
ಜನರನ್ನು ಕರೆದೊಯ್ಯಲು ಮುಂಜಾನೆ ರೈಲು ನಿಲ್ದಾಣಕ್ಕೆಂದು ತನ್ನ ವಾಹನದಲ್ಲಿ ತೆರಳುತ್ತಿದ್ದ ಸುಂಕದಕಟ್ಟೆ ಮೂಜೂರಿನ ಚಾಲಕರೊಬ್ಬರಿಗೆ ಕಾಡಾನೆ ಎದುರುಕೊಂಡಿದೆ, ಓಡೆಕಜೆ ಭಾಗದ ಕಾಲನಿಯೊಂದರಲ್ಲಿ ಅಯ್ಯಪ್ಪ ಮಾಲೆಧಾರಿಗಳಿಗೂ ಕಾಡಾನೆ ಕಾಣಸಿಕ್ಕಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕಾಡಾನೆಯೂ ಕಾಡಂಚಿನ ಪ್ರದೇಶಕ್ಕೆ ತೆರಳಿದೆ ಎಂದು ತಿಳಿದು ಬಂದಿದೆ.
ಜ.2 ರಾತ್ರಿ ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಭಾಗದಲ್ಲಿ ಕಾಣಿಸಿಕೊಂಡಿದ್ದ ಈ ಕಾಡಾನೆ ಏನೆಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡೋತ್ಸವ ಮತ್ತು ವಾರ್ಷಿಕೋತ್ಸವದ ಹಿನ್ನೆಲೆ ಪೂರ್ವ ತಯಾರಿ ಮಾಡುತ್ತಿದ್ದ ಸಂದರ್ಭದಲ್ಲಿ ಸುಮಾರು 8 ಗಂಟೆಯ ಹೊತ್ತಿಗೆ ಶಾಲಾ ಮೈದಾನದ ಮೂಲಕ ಹಾದು ಹೋಗಿತ್ತು. ಇದೇ ಕಾಡಾನೆ ಐತ್ತೂರು ಭಾಗದತ್ತ ಆಗಮಿಸಿದೆ ಎಂದು ಗ್ರಾಮಸ್ಥರು ಅಂದಾಜಿಸಿದ್ದಾರೆ.
ಕಾಡಾನೆಯೂ ಯಾವುದೇ ದಾಂಧಲೆ ಮಾಡದೆ ಇದ್ದರೂ ಜನವಸತಿ ಇರುವ ಪ್ರದೇಶದತ್ತ ಬಂದಿರುವುದರಿಂದ ಗ್ರಾಮದ ಜನರು ಭಯಭೀತರಾಗಿದ್ದಾರೆ. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿರುವುದುದಾಗಿ ತಿಳಿದು ಬಂದಿದೆ. ಐತ್ತೂರು ,ಸುಬ್ರಹ್ಮಣ್ಯ ಸೇರಿದಂತೆ ಕಾಡಂಚಿನ ಪ್ರದೇಶದಲ್ಲಿ ಕಾಡಾನೆ ಸಂಚಾರದ ಸುದ್ದಿ ನಿತ್ಯವೂ ಕೇಳಿ ಬರುತ್ತಿದೆ. ಈ ಭಾಗದಲ್ಲಿ ಕೃಷಿ ತೋಟಕ್ಕೂ ನುಗ್ಗಿ ಈ ಹಿಂದೆ ಕೃಷಿಯನ್ನು ನಾಶ ಪಡಿಸಿರುವ ಬಗ್ಗೆ ವರದಿಯಾಗಿತ್ತು.