


ಕಡಬ ಟೈಮ್, ಕೊಯಿಲ: ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಬಳಿ ಅಕ್ರಮ ದನ ಸಾಗಾಟದ ವಾಹನವೊಂದನ್ನು ಪೊಲೀಸರು ತಡೆಹಿಡಿದಿದ್ದು ವಾಹನ ಬಿಟ್ಟು ಚಾಲಕ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.
ಈ ಘಟನೆ ಜ.14 ಮುಂಜಾನೆ ನಡೆದಿದ್ದು ಸ್ಥಳದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದಾರೆ. ಪಿಕಾಪ್ ವಾಹನದಲ್ಲಿ ಸುಮಾರು ಎಂಟು ಜಾನುವಾರುಗಳಿದ್ದು ಒಂದು ದನ ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ.
ಈ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಹಗ್ಗದಿಂದ ಕಟ್ಟಿರುವುದು ವೀಡಿಯೋಗಳ ಮೂಲಕ ದೃಢವಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಲ್ಲದೆ ಅಕ್ರಮ ಜಾನುವಾರು ಸಾಗಾಟಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿದ್ದಾರೆ.
ಮಾಹಿತಿ ಪ್ರಕಾರ ಪೊಲಿಸರು ಮತ್ತು ಹಿಂದೂಪರ ಸಂಘಟನೆಗಳ ಕಣ್ತಪ್ಪಿಸಲು ಉಪ್ಪಿನಂಹಡಿ-ಸುಬ್ರಹ್ಮಣ್ಯ ರಸ್ತೆಯ ಗೋಳಿತ್ತಡಿ ಬಳಿಯಿಂದ ಕುದುಲೂರು ರಸ್ತೆಗೆ ವಾಹನ ತಿರುಗಿಸಿದರೂ ಬೆನ್ನತ್ತಿ ವಾಹನಕ್ಕೆ ತಡೆ ನೀಡಲಾಗಿದೆ ಎಂಬ ವಿಚಾರ ತಿಳಿದು ಬಂದಿದ್ದು ಹೆಚ್ಚಿನ ವಿವರ ಅಪ್ಡೇಟ್ ಮಾಡಲಾಗುವುದು.